ಉಡುಪಿ: ಅಭ್ಯರ್ಥಿ ಘೋಷಣೆ ಸಂದರ್ಭ ಅಸಮಾಧಾನ ಎಲ್ಲ ಪಕ್ಷಗಳಲ್ಲಿಯೂ ಇರುತ್ತದೆ. ಅದು ಮುಂದಕ್ಕೆ ಸರಿಹೋಗುವ ನಿರೀಕ್ಷೆ ಇದೆ. ಪಕ್ಷದ ಟಿಕೆಟನ್ನು ಓರ್ವರಿಗೆ ಮಾತ್ರ ನೀಡಬಹುದು. ಅವಕಾಶ ವಂಚಿತರಾದವರಿಗೆ ಮುಂದೆ ಸರಕಾರ ರಚನೆಯಾದಾಗ ಬೇರೆ ಅವಕಾಶವನ್ನು ಪಕ್ಷ ನೀಡಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸುವುದು ಪಕ್ಷದ ಮೊದಲ ಗುರಿ. ಸಣ್ಣಪುಟ್ಟ ಬೇಸರವನ್ನು ಮರೆತು ತ್ಯಾಗ ಮಾಡುವುದು ಅನಿವಾರ್ಯ. ಈಗಾಗಲೇ 72 ಅಭ್ಯರ್ಥಿಗಳ ಘೋಷಣೆಯಾಗಿ ಸದ್ಯದಲ್ಲೇ ಎಲ್ಲ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದರು.

