ಹಿರಿಯಡಕ: ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇಗುಲದ ಸಮಗ್ರ ಜೀರ್ಣೋದ್ಧಾರ ಪೂರ್ಣಗೊಂಡಿದ್ದು, ಎ. 16ರಿಂದ ಎ. 25ರ ತನಕ ಬ್ರಹ್ಮಕಲಶೋತ್ಸವ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೀರ್ಣೋದ್ಧಾರ ಸಮಿತಿಯ ಸಂಘಟನ ಕಾರ್ಯದರ್ಶಿ ನಟರಾಜ್ ಹೆಗ್ಡೆ, ಎ. 16ರಂದು ಹೊರೆಕಾಣಿಕೆ, ಎ.20 ರಂದು ಪ್ರತಿಷ್ಠೆ, ಎ. 21ರಂದು ಮಹಾರುದ್ರ ಯಾಗ, ಎ. 22ರಂದು ಕಲಶಾಭಿಷೇಕ, ಎ. 23ರಂದು ಶತಚಂಡಿಕಾ ಯಾಗ ನಡೆಯಲಿದೆ ಎಂದರು
ಬ್ರಹ್ಮಕಲಶೋತ್ಸವದ ಪ್ರಥಮ ದಿನದ ಧಾರ್ಮಿಕ ಸಭೆಯನ್ನು ಮಾತೆಯರಿಗಾಗಿ ಮೀಸಲಿಡಲಾಗಿದ್ದು, ಎ. 19ರ ಸಂಜೆ ನಡೆಯಲಿರುವ ಮಾತೃಸಂಗಮದ ಅಧ್ಯಕ್ಷತೆಯನ್ನು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ ವಹಿಸುವರು. ವಿಶೇಷ ಉಪನ್ಯಾಸಕರಾಗಿ ಬರಹಗಾರ್ತಿ ಡಾ.ಇಂದಿರಾ ಹೆಗ್ಡೆ ಭಾಗವಹಿಸಲಿದ್ದಾರೆ. ಸುಮಾರು 7,000 ಮಾತೆಯರು ಭಾಗವಹಿಸ ಲಿದ್ದಾರೆ. ಬೃಹತ್ ಶೋಭಾಯಾತ್ರೆ ನಡೆಯಲಿದೆ ಎಂದು ವಿವರಿಸಿದರು.
ಎ. 20ರಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಅಧ್ಯಕ್ಷತೆ ಯಲ್ಲಿ “ಸಂತ ಸಂಗಮ’ ನಡೆಯಲಿದೆ. ವಿವಿಧ ಸಂಪ್ರದಾಯಗಳ ಸಾಧು ಸಂತರು ಭಾಗವಹಿಸಲಿ ದ್ದಾರೆ. ಎ. 21ರಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆಶೀರ್ವಚನದೊಂದಿಗೆ ಎನ್. ವಿನಯ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ “ರಾಜಧರ್ಮ ಸಭೆ’ ನಡೆಯಲಿದೆ. ಎ. 22ರಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅವರ ಅಧ್ಯಕ್ಷತೆಯಲ್ಲಿ “ಸುಧರ್ಮ ಸಭೆ’ ಜರಗಲಿದೆ ಎಂದು ಮಾಹಿತಿ ನೀಡಿದರು.

