ಮೂಡಬಿದಿರೆ: ಇನ್ನೋವಾ ಕಾರು ಹಾಗೂ ಓಮ್ನಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓಮ್ನಿಯಲ್ಲಿದ್ದ ತಾಯಿ ಹಾಗೂ ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆ ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಕಾರು ಎಂಬಲ್ಲಿ ಘಟಿಸಿದೆ.
ಮೃತರನ್ನು ತೀರ್ಥಹಳ್ಳಿ ನಿವಾಸಿ ಸೋಮಶೇಖರ್(45) ಹಾಗೂ ತಾಯಿ ರತ್ನಮ್ಮ(70) ಎಂದು ಗುರುತಿಸಲಾಗಿದೆ. ಓಮ್ನಿಯಲ್ಲಿದ್ದ ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
9 ಮಂದಿ ಓಮ್ನಿಯಲ್ಲಿ ತೀರ್ಥಹಳ್ಳಿಯಿಂದ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಓಮ್ನಿ ಕಾರ್ಕಳದ ನೆಲ್ಲಿಕಾರು ಸಮೀಪಿಸುತ್ತಿದ್ದಂತೆ ಇನ್ನೋವಾ ಕಾರು ಢಿಕ್ಕಿಯಾಗಿತ್ತು.
ಢಿಕ್ಕಿಯ ತೀವ್ರತೆಗೆ ಓಮ್ನಿಯಲ್ಲಿದ್ದ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಎರಡೂ ಕಾರುಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತದೇಹಗಳನ್ನು ಮೂಡಬಿದಿರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

