ಗಂಗೊಳ್ಳಿ: ಬೈಕೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಇಲ್ಲಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ.
ಮೀನುಮಾರುಕಟ್ಟೆ ಬಳಿಯ ವಿವಾಸಿ ಬದ್ರುದ್ದೀನ್ ಎಂಬವರಿಗೆ ಈ ಬೈಕ್ ಸೇರಿದ್ದಾಗಿದ್ದು, ಇವರು ತನ್ನ ಮನೆ ಬಳಿ ಬೈಕ್ ನಿಲ್ಲಿಸಿದ್ದಾರೆ. ಇಂದು ಬೆಳಗ್ಗಿನ ಜಾವ ಸುಮಾರು 4.30ರ ವೇಳಗೆ ಕಿಡಿಗೇಡಿಗಳು ಬೈಕ್ಗೆ ಬೆಂಕಿ ಹಚ್ಚಿದ್ದು, ಪರಿಣಾಮ ಬೈಕ್ ಸಂಪೂರ್ಣ ಭಸ್ಮಗೊಂಡಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಪ್ರವೀಣ ನಾಯಕ್, ಸರ್ಕಲ್ ಇನ್ಸ್ ಪೆಕ್ಟರ್ ಪರಮೇಶ ಅವರು ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.
ಇನ್ನೂ ಪಟ್ಟಣದಲ್ಲಿ ಹೆಚ್ಚಿನ ಭದ್ರತೆಗೆ ಹೆಚ್ಚುವರಿ ಪೊಲೀಸ್ರನ್ನು ನಿಯೋಜಿಸಲಾಗಿದೆ.
ರವಿವಾರ ತಡರಾತ್ರಿ ಗಂಗೊಳ್ಳಿಯ ಜಾಮೀಯಾ ಮಸೀದಿ ಹಿಂಭಾಗದ ಸುಗ್ಗಿಬೈಲು ಎಂಬಲ್ಲಿ ಅಬ್ದುಲ್ ಮಜೀದ್ ಎಂಬವರ ಮನೆ ಎದುರಿನಲ್ಲಿ ನಿಲ್ಲಿಸಿದ್ದ ಬೈಕಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದ ಮರುದಿನವೇ ಈ ಘಟನೆ ನಡೆದಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

