ಸುದ್ದಿ9 ಕೈಕಂಬ: ಏರಿದರೂ ಕೈಗೆ ಸಿಗದ ತುಟ್ಟಿಭತ್ಯೆ: ಬೀಡಿ ಕಾರ್ಮಿಕರಿಗೆ ಕಳೆದ ಎಪ್ರಿಲ್ ತಿಂಗಳಿನಿಂದ ತುಟ್ಟಿಭತ್ಯೆ ಏರಿದ್ದರೂ ಅದನ್ನು ಕಂಪೆನಿ ಕೊಡದೆ ವಂಚಿಸಿದೆ ಎಂದು ಆರೋಪಿಸಿದ ಬೀಡಿಕಾರ್ಮಿಕರು ಗುರುಪುರ ಕೈಕಂಬ ಟೆಲಿಫೋನ್ ಬೀಡಿ ಡಿಪೋದ ಮುಂದೆ ಬೀಡಿಕಾರ್ಮಿಕರು ಸಿಐಟಿಯು ಹಾಗೂ ಎಐಟಿಯುಸಿ ನೇತೃತ್ವದಲ್ಲಿ ಅನಿರ್ದಿಷ್ಟಾವಧಿಯ ಪ್ರತಿಭಟನೆಗೆ ತೊಡಗಿದ್ದಾರೆ.
ಕಳೆದ ವರ್ಷದ ಎಪ್ರಿಲ್ ಒಂದರಿಂದ ಪ್ರತೀ ಸಾವಿರ ಬೀಡಿಗೆ ರೂ.21.15 ಹೆಚ್ಚಾಗಿದ್ದರೂ ಕಂಪೆನಿ ಮಾತ್ರ ಅದನ್ನು ಇದುವರೆಗೂ ನೀಡಿಲ್ಲ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಇಷ್ಟು ದಿನ ಕಾಲಾವಕಾಶ ನೀಡಿದ್ದೆವು, ಕಂಪೆನಿ ಕೂಡಾ ನಮಗೆ ತುಟ್ಟಿಭತ್ಯೆ ನೀಡುವ ಭರವಸೆ ನೀಡಿತ್ತು. ಆದರೆ ಕಾಲ ಮಿಂಚಿಹೋಗಿದ್ದು, ಕಾರ್ಮಿಕರಿಗೆ ಸಿಗಬೇಕಾದ ಹಣ ಇದುವರೆಗೂ ಕೈ ಸೇರಿಲ್ಲ ಎಂದು ಬೀಡಿಕಾರ್ಮಿಕರ ಪರವಾಗಿ ಸಂಘಟನೆಯ ಮುಖಂಡ ಎಂ. ಹೊನ್ನಯ್ಯ ಕುಲಾಲ್ ಮಳಲಿ ಆರೋಪಿಸಿದ್ದಾರೆ.
ಕಂಪೆನಿ ನಮಗೆ ಏರಿದ ತುಟ್ಟಿಭತ್ಯೆ ನೀಡದೇ ಇದ್ದರೆ ಸ್ಥಳ ಬಿಟ್ಟು ಕದಲುವುದಿಲ್ಲ. ಈಗೀಗ ಪ್ರತಿಯೊಂದು ವಸ್ತುವಿನ ಬೆಲೆ ಏರಿದ್ದರೂ ಬೀಡಿಕಾರ್ಮಿ ಕರಿಗೆ ಮಾತ್ರ ಚಿಕ್ಕಾಸು ನೀಡಿ ಕಂಪೆನಿ ವಂಚಿಸುತ್ತಿದೆ. ನಮ್ಮ ಬೇಡಿಕೆಗೆ ಕಂಪೆನಿ ಮಣಿಯದೇ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಬೀಡಿಕಾಮರ್ಿಕರು ಬೆಳಗ್ಗಿನಿಂದಲೇ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸಂಜೆಯ ತನಕ ಕಂಪೆನಿಯ ಪರವಾಗಿ ಯಾವುದೇ ಅಧಿಕಾರಿಗಳು ಬಂದಿಲ್ಲ. ಇದರಿಂದ ಬೀಡಿಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರದಿಂದ ಬೀಡಿಕಾರ್ಮಿಕರು ಬೀಡಿ ಕಟ್ಟುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಅದು ನಿನ್ನೆಯವರೆಗೂ ಮುಂದುವರಿದಿದೆ. ಏರಿದ ತುಟ್ಟಿಭತ್ಯೆ ಕೈಗೆ ಸಿಗುವವರೆಗೂ ಬೀಡಿ ಸುತ್ತುವುದಿಲ್ಲ ಎಂಬ ಎಚ್ಚರಿಕೆನೀಡಿದ್ದಾರೆ.
ಗಾಳಿ ಮಳೆಯನ್ನು ಲೆಕ್ಕಿಸಿದೆ ಒದ್ದೆಯಾಗುತ್ತಲೇ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಕಂಪೆನಿ ಮುಂದೆ ಟಿಕಾಣಿ ಹೂಡಲು ಸಿದ್ಧತೆ ನಡೆಸಿದ್ದಾರೆ. ನಮ್ಮ ಬೇಡಿಕೆ ಈಡೇರಿದವರೆಗೂ ಇಲ್ಲೇ ಠಿಕಾಣಿ ಹೂಡುತ್ತೇವೆ, ಏನಾಗುತ್ತದೆಂದು ನೋಡುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದ ಬೀಡಿ ಕಾರ್ಮಿ ಕರು ಟೆಂಟ್ ಹಾಕಿ ಅಲ್ಲೇ ಠಿಕಾಣಿ ಹೂಡಲು ಸಿದ್ಧತೆ ನಡೆಸಿದ್ದಾರೆ.
ಪ್ರತಿಭಟನೆಯ ಮುನ್ನ ಗುರುಪುರ ಕೈಕಂಬದ ಮಾರ್ಕೆಟ್ ರಸ್ತೆಯಿಂದ ಟೆಲಿಫೋನ್ ಬೀಡಿಯ ಡಿಪೋದವರೆಗೆ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಸಿಐಟಿಯುನ ಜಿಲ್ಲಾ ಉಪಾಧ್ಯಕ್ಷ ಯು.ಬಿ.ಲೋಕಯ್ಯ, ಎಐಟಿಯುಸಿಯ ಕಾರ್ಯದರ್ಶಿ ಕರುಣಾಕರ್, ಎಐಟಿಯುಸಿಯ ಉಪಾಧ್ಯಕ್ಷ ಎಂ. ಶಿವಪ್ಪ ಕೋಟ್ಯಾನ್, ಮುಖಂಡರಾದ ಸದಾಶಿವ ದಾಸ್, ಗಂಗಯ್ಯ ಅಮೀನ್ ಮುಂತಾದವರು ಪಾಲ್ಗೊಂಡಿದ್ದರು.


