ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಲಯನ್ಸ್ ಕ್ಲಬ್ಬಿನ ವತಿಯಿಂದ ಕಳೆದ ಎಂಟು ವರ್ಷಗಳ ಹಿಂದೆ ಆರಂಭಗೊಂಡ ಸುಮಾರು 30ಕ್ಕೂ ಮಿಕ್ಕಿ ಮಂದಿ ವಿಕಲಚೇತನ ವಿದ್ಯಾಥಿಗಳು ಪ್ರಸಕ್ತ ವಿಶೇಷ ಚೇತನರಾಗಿ ಹೊರ ಹೊಮ್ಮಿದ್ದಾರೆ. ಪ್ರತೀ ಬುಧವಾರ ಇವರಿಗೆ ಉಚಿತ ಪಿಸಿಯೋಥೆರಪಿ ನೀಡಲಾಗುತ್ತಿದ್ದು, ಇದಕ್ಕಾಗಿ ನಾಲ್ಕು ಮಂದಿ ವಿಶೇಷ ತರಬೇತಿ ಹೊಂದಿದ ಶಿಕ್ಷಕಿಯರನ್ನು ಕೂಡಾ ನೇಮಿಸಿಕೊಳ್ಳಲಾಗಿದೆ. 
‘ವಿಶ್ವ ವಿಶೇಷ ಚೇತನರ ದಿನಾಚರಣೆ’ ಪ್ರಯುಕ್ತ ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನತನಕ ನಡೆದ ವಿವಿಧ ಸ್ಧರ್ಧೆಗಳಲ್ಲಿ ಈ ವಿಶೇಷಚೇತನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು. ಒಂದೆಡೆ ಮಡಕೆ ಒಡೆಯುವ ಸ್ಪರ್ಧೆ , ಆಶು ಭಾಷಣ, ಚಿತ್ರಕಲೆ, ಸಂಗೀತ ಕುರ್ಚಿ , 100 ಮೀ. ಓಟ ಹೀಗೆ ಸ್ಪರ್ಧೆ ನಡೆಯುತ್ತಿದ್ದರೆ ಇನ್ನೊಂದೆಡೆ ಈ ಮಕ್ಕಳ ಪೋಷಕರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಮಕ್ಕಳ ಹೆತ್ತವರು ಕೂಡಾ ಪಾಲ್ಗೊಂಡು ಸಂಭ್ರಮ ಪಟ್ಟರು.
ಉದ್ಘಾಟನೆ:
ಆರಂಭದಲ್ಲಿ ಈ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ಅನುಕಂಪ ತೋರುವ ಬದಲಾಗಿ ಅವರಿಗೆ ವಿಶೇಷ ಅವಕಾಶಗಳನ್ನು ನೀಡಬೇಕು. ಆ ಮೂಲಕ ಅವರ ಹೆತ್ತವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಸಮಾಜದಿಂದ ಆಗಬೇಕು ಎಂದರು. ಬಂಟ್ವಾಳ ಸರ್ವಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಗಳ ಸಹಭಾಗಿತ್ವದಲ್ಲಿ ಲಯನ್ಸ್ ಕ್ಲಬ್ ಈ ಕಾರ್ಯಕ್ರಮ ಆಯೋಜಿಸಿತ್ತು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ ಎಡಪಡಿತ್ತಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಬೂಡ ಅಧ್ಯಕ್ಷ ಸದಾಶಿವ ಬಂಗೇರ, ಲಯನ್ಸ್ ಉಪ ರಾಜ್ಯಪಾಲ ದೇವದಾಸ ಭಂಡಾರಿ, ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಡಾ.ವಸಂತ ಬಾಳಿಗ, ಶಿಕ್ಷಕರ ಸಂಘದ ರಾಜ್ಯ ಪ್ರತಿನಿಧಿ ಕೆ.ರಮೇಶ್ ನಾಯಕ್ ರಾಯಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಲಯನೆಸ್ ಅಧ್ಯಕ್ಷೆ ಚಿತ್ರಾ ಎಡಪಡಿತ್ತಾಯ, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಮಧ್ವರಾಜ್ ಬಿ.ಕಲ್ಮಾಡಿ, ಜಿಲ್ಲಾ ಸಂಚಾಲಕ ಮೊಯ್ದಿನ್ ಕುಂಞ, ಜಯಂತಿ ಎಸ್. ಶೆಟ್ಟಿ ಮತ್ತಿತರರು ಇದ್ದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ರಾಜೇಶ್ ಸ್ವಾಗತಿಸಿ, ವಂದಿಸಿದರು. ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷ ದಾಮೋದರ ಬಿ.ಎಂ. ಪ್ರಾಸ್ತಾವಿಕ ಮಾತನಾಡಿದರು.
