ವಿಟ್ಲ : ವ್ಯಕ್ತಿತ್ವ ವಿಕಸನದಲ್ಲಿ ಪರಿಸರ ಹಾಗೂ ಶಿಕ್ಷಣ ಪ್ರಮುಖವಾದ ಪಾತ್ರ ವಹಿಸುತ್ತದೆ. ಶಿಕ್ಷಕರು ಮಕ್ಕಳ ಉನ್ನತಿಗೆ ಕಾರಣೀಕರ್ತರಾಗುತ್ತಾರೆ. ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣದ ಮೂಲಕ ಸಮಾಜ ಹಾಗೂ ದೇಶದ ಉನ್ನತಿಗೆ ಕಾರಣರಾಗಬೇಕು ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ|| ಎಚ್. ಮಾಧವ ಭಟ್ ಹೇಳಿದರು.ಅವರು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ರಜತ ರಶ್ಮಿ ರಂಗಮಂದಿರದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲೆಯ ಹಳೇ ವಿದ್ಯಾರ್ಥಿನಿ ಇನ್ಟೆಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ನ ಡಿಸೈನ್ ಇಂಜಿನಿಯರ್ ಆದ ಶ್ರೀಮತಿ ಅಶ್ವಿನಿ ಕುಮಾರಿ ಬರಿಮಾರು , ಮಾತನಾಡಿ “ ಸಮಾಜದಲ್ಲಿ ಬೆರೆತು ಹೆಚ್ಚು ಸ್ನೇಹಿತರನ್ನು ಸಂಪಾದಿಸಿಕೊಳ್ಳಬೇಕು ಹಾಗೂ ಜೀವನದಲ್ಲಿ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಾಗ ಸಫಲತೆಯನ್ನು ಕಾಣಬಹುದು” ಎಂದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಕೊಂಬಿಲ ನಾರಾಯಣ ಶೆಟ್ಟಿ, ಉಪಾಧ್ಯಕ್ಷ ಅಪ್ರಾಯ ಪೈ, ಟ್ರಸ್ಟಿ ಜಯಲಕ್ಷ್ಮೀ ನರಸಿಂಹ ಪೈ , ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಉಪಾಧ್ಯಕ್ಷೆ ಲಕ್ಷ್ಮೀ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್.ಜೆ.ಶೆಟ್ಟಿ, ವಿದ್ಯಾರ್ಥಿ ನಾಯಕ ವೈಭವ್ ವಿ.ರಾವ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಸ್ಕೌಟ್ ಮಾಸ್ಟರ್ ರಾಮಚಂದ್ರ ಅಜಿರ ಹಾಗೂ ಫ್ಲೋಕ್ ಲೀಡರ್ ಯಶೋಧ .ಕೆ. ಇವರನ್ನು ಸನ್ಮಾನಿಸಲಾಯಿತು. ಹಾಗೂ ಎಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಶ್ರೀಲಕ್ಷ್ಮೀ ಕೆ. ಮತ್ತು ವಿಶಿಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನೂ ಕೂಡ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಆಡಳಿತಾಧಿಕಾರಿ ಸಿ. ಶ್ರೀಧರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಚಾಲಕ ಪ್ರಹ್ಲಾದ್ ಜೆ ಶೆಟ್ಟಿ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ ಶೆಟ್ಟಿ ವರದಿ ಮಂಡಿಸಿದರು. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಗ್ರೇಸ್ ಪಿ ಸಲ್ಡಾನ ವಂದಿಸಿದರು. ಸಹ ಶಿಕ್ಷಕಿಯರಾದ ಸುಧಾ ಎನ್.ರಾವ್ ಮತ್ತು ರಶ್ಮಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
