ಬಂಟ್ವಾಳ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಕರ್ನಾಟಕ ಸರಕಾರದ ನಗರಾಭಿವೃದ್ಧಿ, ಹಜ್ ಖಾತೆಯ ಸಚಿವ ರೋಷನ್ ಬೇಗ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿಯ ಅಧ್ಯಕ್ಷ ದೇವದಾಸ್ ಶೆಟ್ಟಿ ಅವರು ಶನಿವಾರ ಸಂಜೆ ಈ ದೂರು ದಾಖಲಿಸಿದ್ದಾರೆ. ಸಚಿವ ರೋಷನ್ ಬೇಗ್ ಅವರು ಪುಲಕೇಶಿ ನಗರದಲ್ಲಿ ಅ. 13ರಂದು ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದ ಸಾರ್ವಜನಿಕ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಪ್ರಧಾನಿ ಅವರನ್ನು ಅವಾಚ್ಯ ಶಬ್ಧಗಳನ್ನು ಪ್ರಯೋಗಿಸಿ, ಏಕವಚನದಿಂದ ನಿಂದಿಸಿರುವುದು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಿಂದ ತಿಳಿದುಬಂದಿದೆ.
ದೇಶದ ಘನತೆ ಮತ್ತು ಗೌರವದ ಪ್ರತೀಕವಾಗಿರುವ ಈ ರೀತಿಯಾಗಿ ನಿಂದಿಸಿರುವುದು ದೇಶದ್ರೋಹಿ ಕೃತ್ಯವಾಗಿದೆ. ಸಚಿವರ ಈ ನಿಂದನೆಯ ಮಾತು ಪ್ರಧಾನಿ ಅವರಿಗೆ ಅಗೌರವ ಉಂಟು ಮಾಡಿದ್ದಲ್ಲದೆ, ದೇಶದ ಘನತೆಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ದೂರು ನೀಡುವ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿಗಳಾದ ರಾಮ್ದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ ಉಪಸ್ಥಿತರಿದ್ದರು.
