ಸುದ್ದಿ9 ಕೈಕಂಬ: ಬಜ್ಪೆ ಠಾಣಾ ವ್ಯಾಪ್ತಿಯ ಮಳಲಿ ಎಂಬಲ್ಲಿ ಹುಚ್ಚುನಾಯಿಗಳ ಆರ್ಭಟ ಮಿತಿಮೀರಿದ್ದು ಹಲವರನ್ನು ಕಚ್ಚಿ ಗಾಯಗೊಳಿಸಿದೆ. ಹುಚ್ಚುನಾಯಿ ಬಾಲಕಿಯೋರ್ವಳ ತಲೆಗೆ ಕಚ್ಚಿದ ಪರಿಣಾಮ ಆಕೆಗೆ ಬಲವಾದ ಗಾಯಗಳಾಗಿದ್ದು, ಆಕೆ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಪೈಕಿ ರೇಬಿಸ್ ಹಿಡಿದ ಎರಡು ಜಾನುವಾರುಗಳನ್ನು ಕೊಲ್ಲಲಾಗಿದೆ.
ಇತ್ತೀಚೆಗೆ ಮಳಲಿಪೇಟೆ ಎಂಬಲ್ಲಿ ಎಲ್ಲಿಂದಲೋ ಬಂದ ಹುಚ್ಚುನಾಯಿಯೊಂದು ಮಳಲಿ ಪೇಟೆಯ ಸುತ್ತಮುತ್ತ ಸಿಕ್ಕಸಿಕ್ಕವರಿಗೆಲ್ಲಾ ಕಚ್ಚಿ ಗಾಯಗೊಳಿಸುತ್ತಾ ಹೋಯಿತು. ಇದರಲ್ಲಿ ಬಾಲಕಿಯೋರ್ವಳನ್ನು ಅಟ್ಟಿಸಿಕೊಂಡು ಹುಚ್ಚುನಾಯಿಯೊಂದು ಬಂದಿತು. ಆಗ ಬಾಲಕಿ ಹುಚ್ಚುನಾಯಿಯಿಂದ ತಪ್ಪಿಸಲೆತ್ನಿಸುವಾಗ ಆಯತಪ್ಪಿ ಬಿದ್ದ ಪರಿಣಾಮ ಹುಚ್ಚುನಾಯಿ ಆಕೆಯ ತಲೆಯನ್ನೇ ಬಲವಾಗಿ ಕಚ್ಚಿ ಹಿಡಿಯಿತೆನ್ನಲಾಗಿದೆ. ಕೊನೆಗೆ ಊರವರು ಬಾಲಕಿಯನ್ನು ನಾಯಿಯಿಂದ ಬಿಡಿಸಿ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ. ಮಳಲಿಪೇಟೆಯಲ್ಲಿಯೇ ಹಲವರನ್ನು ಕಚ್ಚಿಗಾಯಗೊಳಿಸಿದ್ದು ಅವರಿಗೆಲ್ಲಾ ಚುಚ್ಚುಮದ್ದಿನ ಚಿಕಿತ್ಸೆ ನೀಡಲಾಗಿದೆ.

ಎರಡು ಹಸುಗಳಿಗೆ ಅಂಟಿದ ರೇಬಿಸ್:
ಹುಚ್ಚುನಾಯಿ ಕಚ್ಚಿದ ಪರಿಣಾಮ ಎರಡು ಹಸುಗಳಿಗೆ ರೇಬಿಸ್ ಅಂಟಿದ್ದು, ಅದನ್ನು ಇತ್ತೀಚೆಗೆ ಕೊಲ್ಲಲಾಗಿದೆ. ಹುಚ್ಚುನಾಯಿ ಕಡಿದ ಪರಿಣಾಮ ಅವುಗಳಿಗೆ ಚುಚ್ಚುಮದ್ದು ನೀಡಲಾಗಿತ್ತು. ಆದರೆ ಅವುಗಳ ವರ್ತನೆ ಇತ್ತೀಚೆಗೆ ಅಸಹಜವಾಗಿ ಕಂಡುಬಂದುದರಿಂದ ಅವುಗಳನ್ನು ಕೊಲ್ಲಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹಲವು ನಾಯಿಗಳಿಗೆ ಅಂಟಿರುವ ಸಾಧ್ಯತೆ:
ಮಳಲಿಯಲ್ಲಿ ಹುಚ್ಚುನಾಯಿ ಹಲವು ನಾಯಿಗಳಿಗೆ ಕಚ್ಚಿದ ಪರಿಣಾಮ ಹಲವು ನಾಯಿಗಳಿಗೆ ಅಂಟಿರುವ ಸಾಧ್ಯತೆ ಇದೆ ಎನ್ನಲಗುತ್ತಿದೆ. ಹುಚ್ಚುನಾಯಿ ಹಿಡಿದ ಹಲವು ನಾಯಿಗಳನ್ನು ಗ್ರಾಮಸ್ಥರೇ ಹಿಡಿದು ಕೊಂದಿದ್ದು, ಇನ್ನು ಕೆಲವು ನಾಯಿಗಳು ತಪ್ಪಿಸಿಕೊಂಡಿವೆ. ಆದ್ದರಿಂದ ಕಟ್ಟೆಚ್ಚರವಾಗಿರುವಂತೆ ಸೂಚಿಸಲಾಗಿದೆ. ಹುಚ್ಚುನಾಯಿ ಕಡಿತದಿಂದ ರೇಬಿಸ್ ರೋಗ ಬರುತ್ತದೆ. ಆದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
