ಗುರುಪುರ : ಕಲಿಯುಗದಲ್ಲಿ ಸತ್ಸಂಗದಿಂದ ದೇವರ ಕಾಣಲು ಸಾಧ್ಯವಿದೆ. ಸತ್ಸಂಗದಿಂದ ಜೀವನ ಸಾರ್ಧಕಗೊಳಿಸಬೇಕು ಎಂದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ, ಹೆಣ್ಮಕ್ಕಳು ಮತ್ತು ಗೋವುಗಳ ರಕ್ಷಣೆಗಾಗಿ ಬಜರಂಗ ದಳ ನಡೆಸುತ್ತಿರುವ ನೈಜ ಕಾಳಜಿಯ ಕೆಲಸವನ್ನು ಶ್ಲಾಘಿಸಿದರು.
ವಜ್ರದೇಹಿ ಬಳಗದ ಪ್ರಾಯೋಜಕತ್ವದಲ್ಲಿ ಆಗಸ್ಟ್ 31ರಂದು ಸಂಜೆ ಮಠದ ಆವರಣದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃಮಂಡಳಿ ಮತ್ತು ದುರ್ಗಾವಾಹಿನಿ ನಡೆಸಿಕೊಟ್ಟ 50ನೇ ಮಹಾ ಸತ್ಸಂಗ, ಭಜನೆ ಸಂಕೀರ್ತನೆ ಕಾರ್ಯಕ್ರಮದಲ್ಲಿ ಸ್ವಾಮಿ ಆಶೀರ್ವಚನ ನೀಡಿದರು.

ಬದುಕಿನಲ್ಲಿ ನಮ್ಮ ಪ್ರಯತ್ನ ಶೇ 99ರಷ್ಟಿದ್ದಾಗ ಖಂಡಿತವಾಗಿಯೂ ದೇವರು ಶೇ ಒಂದು ನೆರವು ನೀಡುತ್ತಾನೆ. ನಂಬಿಕೆ ಮೇಲೆ ಭರವಸೆ ಇರಬೇಕು ಮತ್ತು ಗುರುಗಳ ಅನುಗ್ರಹವೂ ಬೇಕು. ಜೀವನ ಸಾರ್ಥಕವಾಗಬೇಕಿದ್ದರೆ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ಸತ್ಸಂಗ, ಹರಿಕಥಾ ಕೀರ್ತನೆಕಾರ ಶರತ್ ಶೆಟ್ಟಿ ಹೇಳಿದರು.
ಸಭಾ ವೇದಿಕೆಯಲ್ಲಿ ಕೃಷ್ಣ ಕಜೆಪದವು, ರವಿ ಕಜೆಪದವು, ವಿಹಿಂಪ ಸ್ಥಳೀಯ ಮುಖಂಡ ವಿಷ್ಣು ಕಾಮತ್, ಸುರೇಶ್ ಕುಮಾರ್ ಇದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಕಲಾವಿದ ಜಿ ಎಸ್ ಗುರುಪುರ ರಚಿಸಿದ `ರಂಗ್ದ ಸ್ವರ’ ಸಾಹಿತ್ಯ ಸಾದರಗೊಂಡಿತು. ಬಳಿಕ ಸ್ಥಳೀಯ `ರಂಗ್ದ ಕಲಾವಿದೆರ್’ ತಂಡದಿಂದ ಹಾಡಿನೊಂದಿಗೆ ಕುಣಿತದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
——-
