ಬಂಟ್ವಾಳ : ಪ್ರಸಕ್ತ ಸ್ಪರ್ಧಾತ್ಮಕ ಸಮಾಜದಲ್ಲಿ ಮಕ್ಕಳಿಗೆ ಸುಪ್ತ ಪ್ರತಿಭೆ ಅನಾವರಣಗೊಳಿಸುವುದರ ಜೊತೆಗೆ ಅವರಿಗೆ ಬಾಲ್ಯದಿಂದಲೇ ಸೌಹಾರ್ದಯುತ ಬದುಕಿನ ಮಹತ್ವ ತಿಳಿಸಿದಾಗ ಇಂತಹ ಯುವ ಸಂಪತ್ತು ಭವಿಷ್ಯದಲ್ಲಿ ದೇಶಕ್ಕೆ ನಾವು ನೀಡುವ ಮಹತ್ವದ ಕೊಡುಗೆಯಾಗುತ್ತದೆ ಎಂದು ಅಲ್ಲಿಪಾದೆ ಸೈಂಟ್ ಜಾನ್ಸ್ ಚರ್ಚಿನ ಧರ್ಮಗುರು ಗ್ರೆಗರಿ ಪಿರೇರಾ ಹೇಳಿದ್ದಾರೆ.
ತಾಲೂಕಿನ ಅಲ್ಲಿಪಾದೆ ಸೈಂಟ್ ಜಾನ್ಸ್ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ವಾಮದಪದವು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಸಾಮಾನ್ಯರು ಕೂಡಾ ಅಸಾಮಾನ್ಯ ಸಾಧನೆ ಮೂಲಕ ದೇಶದಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ನಾವೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರಪಾಡಿ ಗ್ರಾಮ ಪಂಚಾಯಿತಿ ಸದಸ್ಯ ವಿನ್ಸೆಂಟ್ ಪಿಂಟೊ, ಶಿಕ್ಷಣ ಸಂಯೋಜಕಿ ಸುಜಾತ ಶುಭ ಹಾರೈಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಸ್ವಪ್ನಾ ವಿಶ್ವನಾಥ, ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣ ಕುಲಾಲ್, ಅಸಂತ ಡಿಸೋಜ, ಶಶಿಕಲಾ, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ಲಿಯೋ ಫೆರ್ನಾಂಡಿಸ್, ನಿವೃತ್ತ ಮುಖ್ಯಶಿಕ್ಷಕಿ ಬೆನಡಿಕ್ಟ ಫೆರ್ನಾಂಡಿಸ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ವೇಣುಗೋಪಾಲ, ಚಿನ್ನಸ್ವಾಮಿ, ಸುರೇಖ, ಶುಭಾ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಜೂಲಿಯಾನ, ಸಿಸ್ಟರ್ ಮಾರ್ಗರೆಟ್ ಮತ್ತಿತರರು ಇದ್ದರು.
ಪ್ರೌಢಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಸಿಲ್ವಿಯಾ ಸ್ವಾಗತಿಸಿ, ಶಿಕ್ಷಕಿ ಉಷಾ ವಂದಿಸಿದರು. ಶಿಕ್ಷಕ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.
—
