ಮಂಗಳೂರಿಂದ ಮೂಡಬಿದ್ರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಗುರುಪುರ ಕೈಕಂಬ ರೋಸಾ ಮಿಸ್ತಿಕಾ ಶಾಲೆಯ ಹತ್ತಿರದ ಗುರುಪುರ ಗ್ರಾಮ ಪಂಚಾಯತಿಗೆ ಅನತಿ ದೂರದಲ್ಲಿ ಭವ್ಯ `ಸ್ನೇಹಸದನ’ ಕಟ್ಟಡವಿದೆ. ಇದು ನಿರ್ಗತಿಕ ಮಕ್ಕಳಿಗೆ ಪರಿಪೂರ್ಣ ಆಸರೆಯಾದ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. ಪ್ರೀತಿಯ ಆರೈಕೆಗೆ ಹೆಸರಾಗಿರುವ ಇಲ್ಲಿ ವಾತ್ಸಲ್ಯವೇ ಮೈದಾಳಿದಂತಿದೆ. ಮಾನವೀಯತೆಗೆ ಸ್ಪಷ್ಟ ನಿದರ್ಶನವಾಗಿರುವ ಇಲ್ಲಿ ಮಕ್ಕಳೆಲ್ಲರೂ ದೇವರ ಮಕ್ಕಳೆಂಬಂತೆ ಉಪಚರಿಸಲ್ಪಡುತ್ತಿದ್ದಾರೆsneha-2.

ಭಿನ್ನಚೇತನ ಮಕ್ಕಳಿಗಾಗಿರುವ ಈ ಕೇಂದ್ರವನ್ನು ಕಾಮಿಲಿಯನ್ ಫಾದರುಗಳ (ಪಾದ್ರಿಗಳು) ಸ್ನೇಹ ಚಾರಿಟೇಬಲ್ ಟ್ರಸ್ಟ್ ಸಂಚಾಲಿಸುತ್ತಿದೆ. ಇದೊಂದು ಅಂತಾರಾಷ್ಟ್ರಿಯ ನಂಬಿಗಸ್ಥ ಕೇಂದ್ರವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ 450ಕ್ಕೂ ಅಧಿಕ ವರ್ಷಗಳಿಂದ ಕೆಲಸ ಮಾಡುತ್ತಿದೆ. ಸೈಂಟ್ ಕಾಮಿಲಸ್ ಡೇ ಲಿಲ್ಲೀಸ್ ಇದರ ಸಂಸ್ಥಾಪಕ. ಬಡ ರೋಗಿಗಳಿಗೆ ಗುಣಮಟ್ಟದ ಮತ್ತು ಸಮಗ್ರ ಆರೋಗ್ಯ ಸೇವೆ ಒದಗಿಸಬೇಕೆಂಬ ಆದೇಶ ಈ ಸಂಸ್ಥೆಯ ಮೇಲಿದೆ. sneha-1
ಆರಂಭದಲ್ಲಿ ಈ ಸಂಸ್ಥೆಯು ರೋಗಿಗಳಿಗಾಗಿ ಮೀಸಲಾಗಿದ್ದರೆ, ಕ್ರಮೇಣ ಎಚ್‍ಐವಿ/ಏಡ್ಸ್ಸ್‍ನತ್ತಲೂ ತನ್ನ ವ್ಯಾಪ್ತಿ ವಿಸ್ತರಿಸಿದೆ. ಸಂಸ್ಥೆಯು ಆರಂಭದಲ್ಲಿ 1997ರಲ್ಲಿ ಬೆಂಗಳೂರಲ್ಲಿ ಎಚ್‍ಐವಿ/ಏಡ್ಸ್‍ನೊಂದಿಗೆ ಬದುಕುವ ಜನರಿಗಾಗಿ ಆರೈಕೆ ಮತ್ತು ನೆರವು ಕೇಂದ್ರ `ಸ್ನೇಹಸದನ’ ಆರಂಭಿಸಿ, ಈ ಮೂಲಕ ಸಾಮಾಜಿಕ ಸೇವೆಗೆ ಹೆಸರಾಗಿದೆ. 2001ರಲ್ಲಿ ಮಂಗಳೂರಲ್ಲಿ ಎರಡನೇ `ಸ್ನೇಹಸದನ’ ತೆರೆದುಕೊಂಡಿದೆ. ಇಲ್ಲಿ ಮಾರಣಾಂತಿಕ ರೋಗ ಬಾಧಿತ ಮಕ್ಕಳಿಗೆ ಹೊಸ ಬದುಕು ನೀಡುವ ಪ್ರಯತ್ನ ನಡೆಯುತ್ತಿದೆ. ನಂತೂರಿನ ಯೆವುಜಿನ್ ರೆಂಟ್ ಎಂಬವರು ದಾನ ಮಾಡಿರುವ ಎರಡು ಎಕ್ರೆ ಜಾಗದಲ್ಲಿ ತಲೆ ಎತ್ತಿರುವ ಸ್ನೇಹಸದನವು ತನ್ನ ವ್ಯಾಪ್ತಿಯಲ್ಲಿ ಸದ್ದುಗದ್ದಲವಿಲ್ಲದೆ ನಿರಂತರ ಕೆಲಸ ಮಾಡುತ್ತಿದೆ. ಪ್ರಸ್ತುತ ಭಾರತದ ವಿವಿಧ ರಾಜ್ಯಗಳಲ್ಲಿ ಈ ಟ್ರಸ್ಟ್ ಇಂತಹ ಹಲವು ಕೇಂದ್ರ ಹೊಂದಿದೆ.

ಸೈಂಟ್ ಕಾಮಿಲ್ಲಸ್ ಡೇ ಲೆಲ್ಲೀಸ್ ರೋಗಿಗಳ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಅವರು ರೋಗಗ್ರಸ್ಥ ಜನರಲ್ಲಿ ಏಸುಕ್ರಿಸ್ತರ ವ್ಯಕ್ತಿತ್ವ ಕಂಡಿದ್ದರು. ಆ ದೃಷ್ಟಿಕೋನ ಇಂದಿಗೂ ಅನುಯಾಯಿಗಳಿಂದ ಮುಂದುವರಿದಿದೆ. ಸಾಮಾನ್ಯರಿಗೂ ಪವಿತ್ರ ಹಾಗೂ ಸಮಗ್ರ ಆರೋಗ್ಯ ಸೇವೆ ಒದಗಿಸುವುದು ಸಂಸ್ಥೆಯ ಪರಮ ಗುರಿಯಾಗಿದೆ.
ಮಂಗಳೂರಿನ ಸ್ನೇಹಸದನ 2001 ಫೆಬ್ರವರಿ 4ರಂದು ಉದ್ಘಾಟನೆಗೊಂಡಿತ್ತು. ಇದು ಬದ್ಧತೆ, ಆರೈಕೆ ಮತ್ತು ಕ್ಷಮತೆ ಎಂಬ ಪ್ರಧಾನ ಮೌಲ್ಯಗಳೊಂದಿಗೆ ಮಕ್ಕಳಿಗೆ (ಅನಾಥರಿಗೆ) ಪ್ರೀತಿಯ ಮನೆಯಾಗಿದೆ. 65 ಹಾಸಿಗೆ ಸೌಕರ್ಯವುಳ್ಳ ಇಲ್ಲಿ ಹೆಚ್‍ಐವಿ ಸೋಂಕಿತ 2,500 ವಯಸ್ಕರು ಮತ್ತು 200 ಮಕ್ಕಳಿಗೆ ಸೇವೆ ಕಲ್ಪಿಸಿದೆ. ಪ್ರಸಕ್ತ ಸ್ನೇಹಸದನ ಅನಾಥ ಮತ್ತು ನಿರ್ಗತಿಕ ಮಕ್ಕಳ ಆರೈಕೆ ಮಾಡುತ್ತಿದ್ದು, ಈಗ 40 ಮಕ್ಕಳು ಮತ್ತು 10 ವಯಸ್ಕರಿದ್ದಾರೆ. ಇವರಿಗೆ ಆಶ್ರಯ, ಆಹಾರ, ಕೌಶಲ್ಯ ಶಿಕ್ಷಣ, ಸಮಗ್ರ ಆರೈಕೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. 2015ರಲ್ಲಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸ್ನೇಹಸದನ ಪುರಸ್ಕøತಗೊಂಡಿತ್ತು.
ಕೇಂದ್ರದ ಉದ್ದೇಶ

ಹೆಚ್‍ಐವಿ ಪಾಸಿಟಿವ್ ಸೋಂಕಿತ ಮಕ್ಕಳ ಸಮಗ್ರ ಅಗತ್ಯತೆ ಪೂರೈಸಿ, ಅವರಲ್ಲೂ ಜೀವನೋತ್ಸವ ಹುಟ್ಟಿಸಿ ಸಮಾಜದಲ್ಲಿ ಗೌರವಯುತ ಹಾಗೂ ಗುಣಮಟ್ಟದ ಜೀವನ ಕಲ್ಪಿಸುವ ಉದ್ದೇಶ ಕೇಂದ್ರ ಹೊಂದಿದೆ. ಮಕ್ಕಳ ಆರೈಕೆಯೊಂದಿಗೆ ಇತರ ಉದ್ದೇಶದ ಪಟ್ಟಿ ಹೀಗೆ ಮಾಡಬಹುದು.

* ಎಲ್ಲ ಮಕ್ಕಳಿಗೆ ಗುಣಮಟ್ಟದ ಜೀವನ. * ಸಮಗ್ರ ಆರೈಕೆ ಮತ್ತು ಚಿಕಿತ್ಸೆ.
* ಮಾನಸಿಕ ಮತ್ತು ಆಧ್ಯಾತ್ಮಿಕ ಸೇವೆ. * ರೋಗ ಹರಡುವ ಸಂಭವಕ್ಕೆ ತಡೆ.
* ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವುದು. * ಮೌಲ್ಯಾಧರಿತ ಶಿಕ್ಷಣ ನೀಡುವುದು.
* ಮಕ್ಕಳ ಮೂಲ ಮತ್ತು ತಾರತಮ್ಯ ಹೋಗಲಾಡಿಸುವುದು. * ಮಕ್ಕಳ ಹಕ್ಕುಗಳ ರಕ್ಷಿಸುವುದು.

ಸಂಸ್ಥೆ ಬೃಹತ್ ಚಟುವಟಿಕೆ ಹಮ್ಮಿಕೊಂಡಿದೆ. ಅವುಗಳಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಭಾಷಾ ಕೌಶಲ್ಯದ ಮೂಲಕ ಈ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಪರಿಚಯಿಸುವುದು. ಪ್ರಾಥಮಿಕ ಹಾಗೂ ಸೆಕಂಡರಿ ಶಿಕ್ಷಣ ನೀಡುವುದು. ಮಕ್ಕಳ ಕಲಿಕೆಗಿಂತಲೂ ಹೆಚ್ಚಾಗಿ ಅವರ ಭಾವನೆಗಳಿಗೆ ಆದ್ಯತೆ ನೀಡಿ ಅವರನ್ನು ಸಂತೋಷದಲ್ಲಿಡಲು ಸಂಸ್ಥೆ ನಿರಂತರ ಕೆಲಸ ಮಾಡುತ್ತಿದೆ. ಕೇಂದ್ರದಲ್ಲಿ ವಿಶೇಷ ತರಗತಿ ನಡೆಸಲಾಗುವುದು.

ಮಕ್ಕಳಲ್ಲಿರುವ ನಕಾರಾತ್ಮಕ ಭಾವನೆ ಹೋಗಲಾಡಿಸಿ, ಶಿಕ್ಷಣದ ಮೂಲಕ ಅವರ ಕೌಶಲ್ಯ ಜಾಗೃತಗೊಳಿಸಿ ಜವಾಬ್ದಾರಿಯುತ ಜೀವನ ನಡೆಸಲು ನೆರವಾಗುವ ಈ ಸಂಸ್ಥೆ, ಜೀವನ ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಶಾರೀರಿಕ ವ್ಯಾಯಾಮ, ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದೆ. ವೃತ್ತಿಪರ ವೈದ್ಯರು ಮತ್ತು ದಾದಿಯರ ತಂಡವು ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ. ಕೌನ್ಸಿಲಿಂಗ್ ನಡೆಯುತ್ತಿದೆ. ಇಲ್ಲಿನ ಬಹುತೇಕ ಮಕ್ಕಳು ಆ್ಯಂಟಿ ರೆಟ್ರೋವೈರಲ್ ಥೆರಪಿಯಲ್ಲಿದ್ದಾರೆ. ಮಕ್ಕಳ ದೈಹಿಕ ಶುಚಿತ್ವಕ್ಕೆ ದಾದಿಯರು ಕೆಲಸ ಮಾಡುತ್ತಿದ್ದಾರೆ ಮತ್ತು ಆಗಾಗ್ಗೆ ಸಾಮಾನ್ಯ ದಂತ ಚಿಕಿತ್ಸೆ ಮತ್ತು ಇತರ ವೈದ್ಯಕೀಯ ಶಿಬಿರ ಏರ್ಪಡಿಸಲಾಗುತ್ತದೆ.

ಮಕ್ಕಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಕೆಲವು ಮಕ್ಕಳಿಗೆ ವೈದ್ಯರ ಸಲಹೆ ಮೇರೆಗೆ ವಿಶೇಷ ಆಹಾರ ಒದಗಿಸಲಾಗುತ್ತದೆ. ಮಕ್ಕಳ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಆಟದ ಮೈದಾನ ನಿರ್ಮಿಸಲಾಗಿದ್ದು, ಇಲ್ಲಿ ಎಲ್ಲ ಮಕ್ಕಳು ಒಟ್ಟಾಗಿ ಆಡುತ್ತಾರೆ.

ಅಲ್ಲದೆ ಮಕ್ಕಳಿಗೆ ಬಣ್ಣದ ಕ್ಯಾಂಡಲ್ ತಯಾರಿಸಲು ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಕ್ಯಾಂಡಲ್ ತಯಾರಿ ಘಟಕವೊಂದಿದೆ. ಬಗೆಬಗೆಯ ಚಿತ್ರಕಲೆ, ಗ್ರೀಟಿಂಗ್ ಕಾರ್ಡ್ ತಯಾರಿಸುತ್ತಾರೆ. “ಮಕ್ಕಳ ಹುಟ್ಟುಹಬ್ಬ, ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿ ಅದರ ಮಹತ್ವ ತಿಳಿಸಲಾಗುತ್ತದೆ. ಜಾತಿ-ಮತ ಬೇಧವಿಲ್ಲದೆ ಎಲ್ಲ ರೀತಿಯ ಮಕ್ಕಳನ್ನು ಪ್ರೀತಿಯ ಸೂರಿನಡಿ ನಮ್ಮ ಸಂಸ್ಥೆ ನೋಡುತ್ತಿದೆ” ಎಂದು ಫಾದರ್ ತೇಜಿ ಥಾಮಸ್ ಹೇಳುತ್ತಾರೆ.

* ಮಮತೆ ಮಡಿಲಿಗೆ ಮನಸ್ಸು ಮಿಡಿಯದೇ ?
2011ರ ಸೆಪ್ಟೆಂಬರಿನಲ್ಲಿ ಸ್ನೇಹಸದನದ ಮಕ್ಕಳ ಆರೈಕೆ ಮತ್ತು ನೆರವಿನ ಪ್ರಾಜೆಕ್ಟ್ ಮುಗಿದಿದ್ದರೂ ಈಗಲೂ ದಾನಿಗಳು ಮತ್ತು ದೇವರ ದಯೆಯಿಂದ ಮುಂದುವರಿಯುತ್ತಿದೆ. ಈ ಕೇಂದ್ರಕ್ಕೆ ಹೇಳಿಕೊಳ್ಳುವ ಮೂಲಾದಾಯ ಇಲ್ಲ. ದಾನಿಗಳ ಬಲದಿಂದ ಇದು ಮುಂದುವರಿಯುತ್ತಿದೆ. ನಿರ್ಗತಿಕ ಮಕ್ಕಳು ಸಕಲ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಈ ಪ್ರಾಜೆಕ್ಟ್ ಕೂಡಾ ಮುಂದವರಿಯಲಿದೆ. ದೇವರ ಕೆಲಸದಲ್ಲಿ ಕೈಜೋಡಿಸುವ ಸಮಾಜದ ಎಲ್ಲ ವರ್ಗಗಳ ಸಹೃದಯಿಗಳ ಸಹಾಯಹಸ್ತ ಬಯಸುತ್ತೇವೆ. ಮಾಹಿತಿಗಾಗಿ ಸಂಪರ್ಕಿಸಿರಿ:

ಲೇಖನ :* ದನಂಜಯ ಗುರುಪುರ*

Tel: 0824 / 2258119. Mbl:9448118119 E-mail: snehasadan 05@gmail.com

By suddi9

One thought on “ನಿರ್ಗತಿಕ ಪುಟಾಣಿಗಳಿಗೆ ಮಮತೆಯ ಮಡಿಲು `ಸ್ನೇಹಸದನ’”
  1. Dear Dhananjay Gurpur,
    Greetings from,Snehasadan. You have written well about Snehasadan and the Mission of Camillians. I am here to appreciate the effort that you have taken. Its a great boost for us and the staff and well wishers.
    May the Lord God bless You.
    Director
    Snehasadan

Leave a Reply

Your email address will not be published. Required fields are marked *