ಬಂಟ್ವಾಳ: ಪ್ರಕೃತಿಯಲ್ಲಿನ ವೈಪರಿತ್ಯದಿಂದಾಗಿ ಹವಾಮಾನದಲ್ಲೂ ಬದಲಾವಣೆ ಉಂಟಾಗುತ್ತಿದೆ. ಭೂಮಿಯ ಬಹುಭಾಗದಲ್ಲಿದ್ದ ಮರಗಳು ಮಾನವನ ಬಳಕೆಯಿಂದ ನಾಶವಾಗಿದೆ. ಅದ್ದರಿಂದ ಅರಣ್ಯದ ಪುನರುತ್ಥಾನ ಕಾರ್ಯ ಆಗಬೇಕಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು. 
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ಘಟಕದ ವತಿಯಿಂದ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ರಾಜ್ಯಮಟ್ಟದ ಅರಣ್ಯ ಸಂವರ್ಧನ ಅಭಿಯಾನದ ಪ್ರಯುಕ್ತ ಶನಿವಾರ ನಡೆದ ದೇವರವನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅರಣ್ಯ ಸಂರಕ್ಷಣ ಕಾಯ್ದೆಯಿಂದಾಗಿ ಹೆಕ್ಟೇರ್ಗಟ್ಟಲೆ ಕಾಡುಗಳು ನಾಶವಾಗದೇ ಉಳಿದಿದೆ. ವನ್ಯ ಸಂರಕ್ಷಣ ಕಾಯ್ದೆಯಿಂದಾಗಿ ಕಾಡುಪ್ರಾಣಿಗಳು ಉಳಿದಿದೆ. ಪ್ರಾಣಿಗಳು ಇದ್ದಾಗ ಕಾಡು ಉಳಿಯಲು ಸಾಧ್ಯವಿದೆ ಎಂದ ಅವರು ಇದೊಂದು ಕೃಷಿ, ಅರಣ್ಯ ಪ್ರೋತ್ಸಾಹಕ ಕಾರ್ಯಕ್ರಮವಾಗಿದೆ ಎಂದರು. ಅರಣ್ಯದ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಗ್ಯಾಸ್ ವಿತರಣ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಂಡಿದೆ ಎಂದು ತಿಳಿಸಿದರು. ದೇವಸ್ಥಾನದ ಆವರಣದಲ್ಲಿ ಬಿಲ್ವ ಪತ್ರೆಯ ಗಿಡವನ್ನು ನೆಟ್ಟ ಸಚಿವ ರಮಾನಾಥ ರೈ ಬಳಿಕ ಗಿಡಗಳು ಹಾಗೂ ಬೀದುಂಡೆಯನ್ನು ವಿತರಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಬಾಬು ರೈ ಮಾತನಾಡಿ ಯಾವುದೇ ದೇಶದ ಅಭಿವೃದ್ದಿಯಾಗಬೇಕಾದರೂ ಸೇ. 33 ರಷ್ಟು ಕಾಡು ಬೇಕು. ಅರಣ್ಯದ ನಾಶದಿಂದಾಗಿ ಪ್ರಳಯ ಭೀತಿ ಎದುರಾಗಿದ್ದು ಭೂಮಿಗೆ ಹಸಿರು ಕವಚದ ಹೊದಿಕೆ ಬೇಕಾಗಿದೆ ಎಂದರು. ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ನಿಟಿಲಾಕ್ಷ ಸದಾಶಿವ ದೇವಸ್ಥಾನದ ಜೀಣೋದ್ದಾರ ಸಮಿತಿ ಅಧ್ಯಕ್ಷ ಜಗನ್ನಾಥ ಚೌಟ, ಗೋಳ್ತಮಜಲು ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ನಾರಾಯಣ ವೇದಿಕೆಯಲ್ಲಿದ್ದರು. ಶ್ರೀ.ಕ್ಷೇ.ಧ.ಗ್ರಾ.ಯೋ. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರು ಸ್ವಾಗತಿಸಿದರು, ನಿರ್ದೇಶಕ ಕೆ. ಚಂದ್ರಶೇಖರ್ ಪ್ರಸ್ತಾವಿಸಿದರು, ಯೋಜನಾಧಿಕಾರಿ ಸುನೀತಾ ನಾಯಕ್ ವಂದಿಸಿದರು.
