ಬಂಟ್ವಾಳ: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಜುಲೈ 6ರಂದು ರಾತ್ರಿ 12.30ರ ವೇಳೆ ಮೃತಪಟ್ಟಿದ್ದರೂ ಅವರ ಸಾವಿನ ಘೋಷಣೆಯನ್ನು ಜುಲೈ 7ರಂದು ಘೋಷಿಸಿದ ಕಾರಣ ಅಂಗಾಂಗದಾನವನ್ನೂ ಮಾಡಲಾಗಲಿಲ್ಲ. ಶರತ್ ಕೊನೆಯಾಸೆಯನ್ನು ಈಡೇರಿಸಲು ತಂದೆಗೆ ಸಾಧ್ಯವಾಗಲಿಲ್ಲ ಇದಕ್ಕೆ ಮುಖ್ಯಮಂತ್ರಿಯೇ ಹೊಣೆ ಎಂದು ದ..ಕ.ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಆರೋಪಿಸಿದೆ.
ಪಕ್ಷದ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಶ್ ಕಣೆಮರಡ್ಕ ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಯ ರಾಜಕೀಯ ಸಭೆಗೋಸ್ಕರ ಶರತ್ ಮೃತಪಟ್ಟರೂ ಅದನ್ನು ಅವರ ತಂದೆತಾಯಿಗೆ ತಿಳಿಸಿರಲಿಲ್ಲ. ಸಿದ್ಧರಾಮಯ್ಯ ಅವರ ರಾಜಕೀಯ ಕಾರ್ಯಕ್ರಮ ಯಶಸ್ಸಿಗೆ ಶರತ್ ಸಾವಿನ ಘೋಷಣೆಯನ್ನೂ ವಿಳಂಬಿಸಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆ ಎಂದು ದೂರಿದರು.
ಜಿಲ್ಲೆಯಾದ್ಯಂತ ಅರಾಜಕತೆ ಮೂಡಿಸುವ ಹುನ್ನಾರವನ್ನು ರಾಜ್ಯ ಸರಕಾರ ಮಾಡುತ್ತಿದೆ. ಕಲ್ಲಡ್ಕ ಘಟನೆ ಬಳಿಕ ಎರಡು ಕೊಲೆ ನಡೆಯಿತು. ಉಳ್ಳಾಲದಲ್ಲಿ ಎರಡು ಅಹಿತಕರ ಘಟನೆ ನಡೆದಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯು.ಟಿ.ಖಾದರ್ ಕ್ಷೇತ್ರಗಳಲ್ಲಿ ನಡೆದ ಅಹಿತಕರ ಘಟನೆಯಿಂದಾಗಿ ಅರಾಜಕತೆ ಮೂಡಿದ್ದು ಇಲ್ಲಿ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ವಿಧಿಸಲಾಗಿದ್ದೇನೋ ಸರಿ, ಆದರೆ ಇಡೀ ಜಿಲ್ಲೆಗೆ ನಿಷೇಧಾಜ್ಞೆ ವಿಧಿಸುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದರು.
ಜಿ ಲ್ಲೆಯ ಇಬ್ಬರು ಸಚಿವರ ವೈಫಲ್ಯದಿಂದಾಗಿಯೇ ಈ ಸೆಕ್ಷನ್ ಅನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗಿದೆ ಎಂದು ಹೇಳಿದ ಸುರೇಶ್, ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆ, ಹಲ್ಲೆಗಳಿಗೆಲ್ಲ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಯು.ಟಿ.ಖಾದರ್ ಅವರೇ ನೇರ ಕಾರಣ. ಆದರೆ ತಮ್ಮ ತಪ್ಪನ್ನು ಬಿಜೆಪಿ ಮತ್ತು ಸಂಘ ಪರಿವಾರದ ತಲೆಗೆ ಕಟ್ಟುವ ದುರುದ್ದೇಶದಿಂದ ಬಿಜೆಪಿ ಮತ್ತು ಸಂಘಪರಿವಾರದ ಪ್ರಮುಖ ನಾಯಕರ ಮೇಲೆ ಐಪಿಸಿ ಸೆಕ್ಷನ್ 308ರಡಿ ಕೇಸು ದಾಖಲಿಸಿ ನಾಯಕರ ಮನೆಗಳಿಗೆ ಮಧ್ಯರಾತ್ರಿಯ ಅಸಮಯದಲ್ಲಿ ನುಗ್ಗಿ ಮಹಿಳೆಯರ, ಮಕ್ಕಳ ಮುಂದೆ ಮನೆಯಲ್ಲಿ ಭೀತಿಯ ವಾತಾವರಣ ಮೂಡಿಸುತ್ತಿದ್ದಾರೆ. ಇದನ್ನು ಪಕ್ಷ ಬಲವಾಗಿ ಖಂಡಿಸುತ್ತಿದ್ದು, ಕೂಡಲೇ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಶರತ್ ಕೊಲೆಯ ನಿಜವಾದ ಆರೋಪಿಗಳನ್ನು ಬಂಧಿಸಿ, ನಿರಪರಾಧಿಗಳ ಮೇಲೆ ಕೇಸುಗಳನ್ನು ಹಿಂಪಡೆಯಬೇಕು. ತಪ್ಪಿದಲ್ಲಿ ಬಿಜೆಪಿ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದು ಹೇಳಿದರು.
ಸಭೆಗೆ ಬಹಿಷ್ಕಾರ:
ಈ ಸಂದರ್ಭ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಜಿಲ್ಲಾಡಳಿತ ಶಾಂತಿ ಸಭೆಯನ್ನು ಕರೆದಿದ್ದು ಅದನ್ನು ಬಿಜೆಪಿ ಬಹಿಷ್ಕರಿಸುತ್ತದೆ. ನಿರಪರಾಧಿಗಳ ಮೇಲೆ ಕೇಸುಗಳನ್ನು ಹಾಕಿ ಶಾಂತಿಸಭೆ ಮಾಡಿಸುವುದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದರು.
ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಕ್ಷೇತ್ರ ಅಧ್ಯಕ್ಷ ಸಾಂತಪ್ಪ ಪೂಜಾರಿ, ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ ಅಣ್ಣಳಿಕೆ, ಉಪಾಧ್ಯಕ್ಷ ಸೋಮಪ್ಪ ಕೋಟ್ಯಾನ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *