ಬಂಟ್ವಾಳ: ಕಾರೊಂದಕ್ಕೆ ತೈಲಾ ಸಾಗಾಟದ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ವೃದ್ಧರೊಬ್ಬರು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಾಣಿ ಸಮೀಪದ ಬುಡೋಳಿಯಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದೆ. ಬಂಟ್ವಾಳ ಕೆಳಗಿನಪೇಟೆ ನಿವಾಸಿ ಮೂಸಬ್ಬ(85) ಅಪಘಾತದಿಂದ ಮೃತಪಟ್ಟವರು. ಘಟನೆಯಿಂದ ಮೂಸಬ್ಬರ ಮಗ ಮುಹಮ್ಮದ್(49), ಸೊಸೆ ತಾಹಿರ(39) ಮೊಮ್ಮಕ್ಕಳಾದ ಮುಹಮ್ಮದ್ ಇರ್ಫಾನ್(20) ಫಾತಿಮಾ ತಸ್ಲೀಮ(17), ಮುಹಮ್ಮದ್ ಇಸ್ಫಾಕ್(13) ಗಾಯಗೊಂಡಿದ್ದು ತುಂಬೆ ಮತ್ತು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
ಬಂಟ್ವಾಳದವರಾದ ಇವರು ವ್ಯಾಪಾರದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಸಕಲೇಶಪುರದಲ್ಲಿ ನೆಲೆಸಿದ್ದಾರೆ. ಈದುಲ್ ಫಿತ್ರ್ ಹಬ್ಬದ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ಶಾಂತಿಅಂಗಡಿಯ ತಾಯಿರಾರ ಮನೆಗೆ ಬರುತ್ತಿದ್ದ ಇವರ ಕಾರಿಗೆ ಬೆಳಗ್ಗೆ ಮಾಣಿ ಸಮೀಪದ ಬುಡೋಳಿಯಲ್ಲಿ ತೈಲಾ ಸಾಗಟದ ಟ್ಯಾಂಕರ್ ಢಿಕ್ಕಿ ಹೊಡೆದು ಅಪಘಾತ ಸಂಘವಿಸಿದೆ.
ಅಪಘಾತದಿಂದ ಗಾಯಗೊಂಡಿದ್ದ ಎಲ್ಲರನ್ನು ತತ್ಕ್ಷಣ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಮೂಸಬ್ಬ ಮತ್ತು ಮುಹಮ್ಮದ್ ಇರ್ಫಾನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಮೂಸಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳಿದವರು ತುಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
