ಬಂಟ್ವಾಳ: ಬೆಂಜನಪದವಿನ ಆಟೋ ಚಾಲಕ ಹಾಗೂ ಎಸ್.ಡಿ.ಪಿ.ಐ. ಮುಖಂಡ ಅಶ್ರಫ್ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿ ಆರಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದ್ದು, ಹಲವರ ಬಳಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆದಿದೆ.

ಕಲ್ಲಡ್ಕ ಮತ್ತು ಬೆಂಜನಪದವಿನಲ್ಲಿ ನಡೆದ ಅಹಿತಕರ ಘಟನೆ ಬಳಿಕ ಬಂಟ್ವಾಳ ತಾಲೂಕಿನಲ್ಲಿ ಬಂದೋಬಸ್ತ್ ಬಿಗುಗೊಳಿಸಲು ಕರ್ನಾಟಕ ರಾಜ್ಯ ಪೊಲೀಸ್ ಕ್ಷಿಪ್ರ ಕಾರ್ಯಪಡೆ ಬಂಟ್ವಾಳಕ್ಕೆ ಬಂದಿದೆ. ಶುಕ್ರವಾರ ಎಡಿಜಿಪಿ ಅಲೋಕ್ ಮೋಹನ್ ಬಂಟ್ವಾಳ ನಗರ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಐಜಿ ಹರಿಶೇಖರನ್, ಎಸ್ಪಿಗಳಾದ ಭೂಷಣ್ ಜಿ. ಬೊರಸೆ, ಸುಧೀರ್ ರೆಡ್ಡಿ, ಎಡಿಶನಲ್ ಎಸ್ಪಿ ವಿಷ್ಣುವರ್ಧನ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಜತೆಗಿದ್ದು ಪರಿಸ್ಥಿತಿ ಅವಲೋಕನ ನಡೆಸಿದರು.
ಕಲ್ಲಡ್ಕ ಘಟನೆ ಬಳಿಕ ಬೆಂಜನಪದವು ಹತ್ಯೆ ಘಟನೆಗೆ ಶಿಫ್ಟ್ ಆದ ವಿಚಾರಗಳ ಬಗ್ಗೆ ವಾಟ್ಸಾಪ್, ಫೇಸ್ ಬುಕ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡಿಸುವುದು ನಿಂತಿಲ್ಲ. ಆರೋಪ, ಪ್ರತ್ಯಾರೋಪಗಳು, ಪ್ರಚೋದನಕಾರಿ ಸಂದೇಶಗಳನ್ನು ಹರಡಿಸುವುದರ ವಿರುದ್ಧ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದು, ಸುಳಿವು ಕೊಟ್ಟವರ ಹೆಸರನ್ನು ಗುಪ್ತವಾಗಿಡಲಾಗುವುದು ಎಂದು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಎರಡು ಕೇಸ್ ಗಳಷ್ಟೇ ದಾಖಲಾಗಿವೆ.
ಶುಕ್ರವಾರ ಕಲ್ಲಡ್ಕ, ಬಿ.ಸಿ.ರೋಡ್, ಮೇಲ್ಕಾರ್ ಸಹಿತ ಹೆದ್ದಾರಿ ಬದಿಯ ಪ್ರಮುಖ ಪೇಟೆಗಳು ಕಳಾಹೀನವಾಗಿತ್ತು. ಬಿ.ಸಿ.ರೋಡ್ ಸಹಿತ ಪ್ರಮುಖ ಸೂಕ್ಷ್ಮ ಪ್ರದೇಶಗಳಾದ ಕಲ್ಲಡ್ಕ, ಮೇಲ್ಕಾರ್, ಫರಂಗಿಪೇಟೆ ಗಳಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಕ್ಷಿಪ್ರ ಕಾರ್ಯಪಡೆ ಸಂಚಾರ ನಡೆಸಿತು. ಸುಮಾರು ನೂರೈವತ್ತು ಪೊಲೀಸರು ನಾಲ್ಕು ತುಕಡಿಗಳಲ್ಲಿ ಶುಕ್ರವಾರ ಆಗಮಿಸಿ ದ್ದಾರೆ. ಶನಿವಾರ ಇನ್ನಷ್ಟು ಪೊಲೀಸರು ಆಗಮಿಸುವ ನಿರೀಕ್ಷೆ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಣ್ಗಾವಲು ಹಾಕಲಾಗುವುದು.
