ಬಂಟ್ವಾಳ: ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯಿಂದ ಆಂಗ್ಲ ಭಾಷಾ ಕಲಿಕೆಯನ್ನು ನಿಷೇದಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನಲೆಯಲ್ಲಿ ಗುರುವಾರ ದಡ್ಡಲಕಾಡು ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಸಂಭ್ರಮ ಆಚರಿಸಿದರು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ ಬಡ ವಿದ್ಯಾರ್ಥಿಗಳ ಪರವಾಗಿ ಉಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ಪೋಷಕರಲ್ಲಿದ್ದ ಆತಂಕ ದೂರವಾಗಿ ವಿದ್ಯಾರ್ಥಿಗಳು ಯಥಾಸ್ಥಿತಿಯಲ್ಲಿ ಶಿಕ್ಷಣ ಮುಂದುವರಸಲು ಸಾಧ್ಯವಾಗಿದೆ. ಪ್ರಕಾಶ್ ಅಂಚನ್ ಅವರ ಪ್ರಯತ್ನ ಶ್ಲಾಘನೀಯ ಎಂದರು.
ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ನ್ಯಾಯಲಯರ ತೀರ್ಪು ವಿದ್ಯಾರ್ಥಿಗಳ ಪೋಷಕರಿಗೆ ಸಂತೋಷ ನೀಡಿದೆ. ಇದೇ ರೀತಿ ಎಲ್ಲಾ ಶಾಲೆಗಳಲ್ಲೂ ಎಲ್ಕೆಜಿ ಯುಕೆಜಿ ತರಗತಿ ತೆರಯುವ ಅವಕಾಶ ಸಿಗುವಂತಾಗಲಿ ಎಂದರು. ಇದೇ ಸಂದರ್ಭ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ಈ ಸಂದರ್ಭ ಉದ್ಯಮಿಗಳಾದ ಜಿತೇಂದ್ರ ಸಾಲ್ಯಾನ್, ಉಮೇಶ್ ಕುಲಾಲ್, ಪೂವಪ್ಪ ಮೆಂಡನ್ ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ ಸ್ವಾಗತಿಸಿ, ಸಹ ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ವಂದಿಸಿದರು.
