ಬಂಟ್ವಾಳ : ಮಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿ ಸುನಿಲ್ ನಾಯ್ಕ್ಗೆ ಮತಿಭ್ರಮಣೆಯಾಗಿದೆ. ಮುಸ್ಲಿಮರ ಮೇಲೆ ಪೂರ್ವಗ್ರಹ ಪೀಡಿತವಾಗಿರುವ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲವಾದರೆ ದ.ಕ. ಜಿಲ್ಲೆಯ ಮುಸ್ಲಿಮ್ ಯುವಕರಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಕಮಿಷನರ್ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳಿಗೆ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಈ ಹಿಂದೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಅದರಂತೆ ಸುನಿಲ್ ನಾಯ್ಕ್ನನ್ನು ವರ್ಗಾವಣೆ ಮಾಡಿದ್ದರೆ ಖುರೈಶಿಯ ಕಿಡ್ನಿಗಳು ವಿಫಲವಾಗುತ್ತಿರಲಿಲ್ಲ ಎಂದು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದರು.
ಅಹ್ಮದ್ ಖುರೈಶಿ ಎಂಬಾತನ ಮೇಲೆ ಬರ್ಬರ ಪೊಲೀಸ್ ದೌರ್ಜನ್ಯ ಮತ್ತು ಪ್ರತಿಭಟನಕಾರರ ಮೇಲೆ ಲಾಠಿಚಾರ್ಜ್, ಬಂಧನವನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿಯಿಂದ ಬುಧವಾರ ಬಿ.ಸಿ.ರೋಡಿನಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಂಗಳೂರು ಸಿಸಿಬಿ ಪೊಲೀಸರಿಂದ ಜಿಲ್ಲೆಯ ಮುಸ್ಲಿಮರು ಪದೇ ಪದೇ ವಿವಿಧ ಹಿಂಸೆಗೆ ಒಳಗಾಗುತ್ತಿದ್ದಾರೆ. ಅಹ್ಮದ್ ಖುರೈಶಿಯನ್ನು 7 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಕಿಡ್ನಿಗಳು ವಿಫಲವಾಗುವವರೆಗೆ ಚಿತ್ರಹಿಂಸೆ ನೀಡಿರುವುದಲ್ಲದೆ ಚಿಕಿತ್ಸೆಯನ್ನು ನಿರಾಕರಿಸಿರುವ ಮಂಗಳೂರು ಸಿಸಿಬಿ ಪೊಲೀಸರ ಕೃತ್ಯ ಹಿಟ್ಲರನ್ನು ಮೀರಿಸುವಂತಿದೆ. ಅನ್ಯಾಯಕ್ಕೊಳಗಾದವರು ನ್ಯಾಯ ಕೇಳಲು ತೆರಳಿದರೆ ಲಾಠಿಚಾರ್ಜ್, ಸುಳ್ಳು ಮೊಕದ್ದಮೆಗಳನ್ನು ಹೂಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
