ಕೈಕಂಬ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಕೆ.ಕೆ.ಎಸ್ ಯೋಜನೆ ಹಾಗೂ ಗುರುಪುರ ಗ್ರಾಮ ಪಂಚಾಯತ್ ಇವುಗಳ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ಗುರುಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಪ್ರಜ್ಞಾ ಸಲಹಾಕೇಂದ್ರದ ಕೆ.ಕೆ.ಎಸ್ ಯೋಜನಾ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್ ಅವರು ಮಹಿಳಾ ದಿನವನ್ನು ಆಚರಿಸುವ ಮಹತ್ವವನ್ನು ತಿಳಿಸುತ್ತಾ, ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಶೋಷಣೆಗೊಳಗಾಗುವುದರ ವಿರುದ್ಧ ಹೋರಾಡುವ ಅನಿವಾರ್ಯತೆ ಹಾಗೂ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮುಂದಡಿ ಇಡಬೇಕೆಂದು ಆಶಿಸಿದರು. ಇದೇ ಸಂದರ್ಭದಲ್ಲಿ ಗ್ರಾ.ಪಂ. ಕಾರ್ಯದರ್ಶಿಗಳಾದ ಕೇಶವ ಮಹಿಳಾ ದಿನಾಚರಣೆಯ ಶುಭಾಶಯವನ್ನು ತಿಳಿಸುತ್ತಾ ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಕೈಗೊಂಡಿರುವ ಸ್ವಚ್ಚತಾ ಸಪ್ತಾಹ ಕಾರ್ಯಕ್ರಮದ ರೂಪುರೇಶೆಗಳ ಬಗ್ಗೆ ಮಾಹಿತಿ ಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಪ್ರಜ್ಞಾ ಸಲಹಾ ಕೇಂದ್ರ ಕೈಕಂಬ ವಲಯ ಹಾಗೂ ನೀರುಮಾರ್ಗ ವಲಯದ ಸ್ವಸಹಾಯ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗುರುಪುರ ಗ್ರಾ.ಪಂ.ಅಧ್ಯಕ್ಷ ರು, ಸರ್ವಸದಸ್ಯರುಗಳು, ಕಂದಾವರ ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರು ಪಂ.ಸಿಬ್ಬಂದಿಗಳು, ಪ್ರಜ್ಞಾಸಲಹಾಕೇಂದ್ರದ ಸಿಬ್ಬಂದಿ ವರ್ಗವರು ಉಪಸ್ಥಿತರಿದ್ದು, ಗ್ರಾ.ಪಂ.ಕಾರ್ಯದರ್ಶಿ ಕೇಶವ ಸ್ವಾಗತಿಸಿ ಪ್ರಜ್ಞಾ ಸಲಹಾ ಕೇಂದ್ರದ ರೇಶ್ಮಾ ಕಾರ್ಯಕ್ರಮ ನಿರೂಪಿಸಿ ಸಂಘದ ಸದಸ್ಯೆ ಪ್ರಪುಲ್ಲ ಧನ್ಯವಾದವಿತ್ತರು.

