ಸುದ್ದಿ9 ಮೂಡುಬಿದರೆ: ಸರಳ, ಸಜ್ಜನಿಕೆಯಲ್ಲಿ ಸೌಂದರ್ಯವಿದೆ. ವಿನಯವಂತಿಕೆಯಲ್ಲೊಂದು ಘನತೆಯಿದೆ. ಭಾರತೀಯ ಮೌಲ್ಯ ಮಕ್ಕಳಲ್ಲಿ ಬಿತ್ತುವ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಹಿಳೆಯರಿಂದ ಆಗಬೇಕು. ಮಹಿಳೆಯರಲ್ಲಿ ಕತೃತ್ವ ಬೆಳೆಸಲು, ಮಾನವ ಸಂಬಂಧ ಬೆಸೆಯಲು ಸಂಘ ಸಂಸ್ಥೆಗಳು ಸಹಕಾರಿ ಎಂದು ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು.
ರೋಟರಿ ಸಮ್ಮಿಲನ್ ಹಾಲ್ ನಲ್ಲಿ ನಡೆದ ಇನ್ನರ್ ವೀಲ್ ಕ್ಲಭ್ ಪದಗ್ರಹಣ ಸಮಾರಂಭವು ಸಮ್ಮಿಲನ್ ಹಾಲ್ನಲ್ಲಿ ಸೋಮವಾರ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು.
ಮೂಢನಂಬಿಕೆಯನ್ನು ನಿಷೇಧಿಸಲು ಪ್ರಯತ್ನಗಳು ನಡೆಯುತ್ತಿದ್ದರೆ ಸುಶಿಕ್ಷಿತರಲ್ಲೇ ಹೊಸ ಮೂಢನಂಬಿಕೆಗಳನ್ನು ಮಾಧ್ಯಮಗಳು ಸೃಷ್ಠಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದ ಅವರು ಮಕ್ಕಳಲ್ಲಿ ಸ್ವಾಭಿಮಾನದ ಬದುಕನ್ನು, ಜೊತೆಗೆ ಸಮಾಜ ಸೇವೆ, ಜೀವನ ಮೌಲ್ಯಗಳನ್ನು ಕಲಿಸಿಕೊಡಬೇಕಾದ ಅಗತ್ಯವಿದೆ ಎಂದರು.
ಸಮಾಜ ಸೇವಾ ಚಟುವಟಿಕೆಯಂಗವಾಗಿ ಬಡರೋಗಿಯ ಚಿಕಿತ್ಸೆಗೆ ಆರ್ಥಿಕ ನೆರವು, ಹಾಗೂ ಬಾಬುರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವಿದ್ಯಾರ್ಥಿ ಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ನೂತನ ಅಧ್ಯಕ್ಷೆ ವೀಣಾ ರತ್ನರಾಜ್ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ಕಾರ್ಯಯೋಜನೆಗಳಿಗೆ ಸದಸ್ಯರ ಸಹಕಾರ ಕೋರಿದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ.ಮುರಳಿಕೃಷ್ಣ, ಇನ್ನರ್ವೀಲ್ ಜಿಲ್ಲಾ ಸಮಿತಿಯ ಇಎಸ್ಸಿ ಚಿತ್ರಾರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನಿರ್ಗಮನ ಅಧ್ಯಕ್ಷೆ ಯಾಸ್ಮಿನ್ ಸಿ.ಎಚ್, ಕಾರ್ಯದರ್ಶಿ ಭೀಫಾ ಶರೀಫ್, ನೂತನ ಕಾರ್ಯದರ್ಶಿ ಸುಜಾತ ಜೈನ್ ಉಪಸ್ಥಿತರಿದ್ದರು. ಯಾಸ್ಮಿನ್ ಹೆಚ್.ಸಿ ಸ್ವಾಗತಿಸಿದರು. ಸುಜಾತ ಜೈನ್ ವಂದಿಸಿದರು. ಸೀಮಾ ಸುದೀಪ್ ಹಾಗೂ ಪೂರ್ಣಿಮಾ ದಾಮೋದರ್ ಕಾರ್ಯಕ್ರಮ ನಿರ್ವಹಿಸಿದರು.

