ಗುರುಪುರ : ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಟ್ಟ ಪ್ರದೇಶ ಕುಕ್ಕದಕಟ್ಟೆಯಲ್ಲಿ ಜ. 7ರಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿದ ಸಂಭ್ರಮದಿಂದ ನಡೆದಿದ್ದು, ಸಾಹಿತ್ಯೇತರ ಆಸಕ್ತರೂ ಸಮ್ಮೇಳನದ ಸವಿ ಅನುಭವಿಸಿದರು.

g-4

ಫಲ್ಗುಣಿ ನದಿ ಪಕ್ಕದಲ್ಲಿರುವ ವೈದ್ಯನಾಥ ದೈವಸ್ಥಾನದ ಸಮುದಾಯ ಭವನದಲ್ಲಿ ನಿರ್ಮಿಸಲಾಗಿದ್ದ ಮಂದಾರ ಕೇಶವ ಭಟ್ ವೇದಿಕೆಯಲ್ಲಿ ಮಾನವೀಯ ಸಾಹಿತಿ ಶ್ರೀಮತಿ ಚಂದ್ರಕಲಾ ನಂದಾವರ ಅಧ್ಯಕ್ಷತೆಯಲ್ಲಿ ದಿನಪೂರ್ತಿ ಸಮ್ಮೇಳನ ನಡೆಯಿತು. ಬೆಳಿಗ್ಗೆ 9ರ ಸುಮಾರಿಗೆ ಗುರುಪುರ ಪೇಟೆಯಿಂದ ಕುಕ್ಕದಕಟ್ಟೆಯವರೆಗೆ ನಡೆದ ಶಾಲಾ ಮಕ್ಕಳು ಮತ್ತು ಊರ ನಾಗರಿಕರು ಪಾಲ್ಗೊಂಡ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ ಊರಿನ ಶಿಸ್ತು ಮತ್ತು ಸಮ್ಮೇಳನದ ಯಶಸ್ಸಿಗೆ ನಾಂದಿಯಾಯಿತು.

ಬಳಿಕ ನಾಡಿನ ಕವಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಟಿ ಸಿದ್ದರಾಮಯ್ಯರಿಂದ ದೀಪ ಬೆಳಗಿಸಿ ಸಮ್ಮೇಳನ ಉದ್ಘಾಟನೆಗೊಂಡಿತು. “ಜೀವನ ಮೌಲ್ಯಗಳ ಕುಸಿಯುತ್ತಲೇ ಕನ್ನಡ ಸಾಹಿತ್ಯಾಭಿರುಚಿಯ ಆಸಕ್ತಿಯೂ ಬೆಲೆ-ನೆಲೆ ಕಳೆದುಕೊಳ್ಳುತ್ತದೆ. ಆದರೂ ಈ ಸಮ್ಮೇಳನವು ಜಾತ್ರೆಯೋಪಾದಿಯಲ್ಲಿದ್ದು, ಪರಂಪರೆ ಬಿಂಬಿಸುವ ಸಮಾವೇಶಗಳಾಗಿವೆ ಎಂಬುದು ಸಮಾಧಾನಕರ ಸಂಗತಿ. ಇಂತಹ ಸಮಾವೇಶಗಳಿಂದ ಕನ್ನಡ ನಾಡಿನ ಸಂಸ್ಕೃತಿಯ ಉಳಿವಿನ ನಿರೀಕ್ಷೆ ಸದಾ ಜಾಗೃತವಾಗಿರುತ್ತದೆ” ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

g-2

ಪ್ರಸಕ್ತ ಟೀವಿ ಮಾಧ್ಯಮಗಳಲ್ಲಿನ ಕನ್ನಡ ಹಾಸ್ಯ ಕಾರ್ಯಗಳ ಬಗ್ಗೆ ಟೀಕೆ ವ್ಯಕ್ತಪಡಿಸಿದ ಅವರು, ಟೀವಿ ಚಾನೆಲ್ಲುಗಳಲ್ಲಿ ಪ್ರಸಾರವಾಗುವ ಬಹುತೇಕ ಇಂತಹ ಕಾರ್ಯಕ್ರಮಗಳು ಕನ್ನಡದ ಕೊಲೆ ಮಾಡುತ್ತಿದ್ದು, ಕುಟುಂಬ ಸಮೇತ ವೀಕ್ಷಿಸಲು ಅಸಾಧ್ಯವಾದಂತಹ ದ್ವಂದ್ವ ಹಾಗೂ ಅಶ್ಲೀಲತೆಯಿಂದ ಕೂಡಿರುತ್ತದೆ ಎಂದರು. ಕರಾವಳಿ ಕನ್ನಡಿಗರ ಸಂಸ್ಕøತಿ ಮೆಚ್ಚುವಂತಹದ್ದು ಎಂದವರು, ತುಳುವನ್ನು ಆಡುಮಾತಾಗಿಸಿಟ್ಟುಕೊಂಡಿರುವ ಇಲ್ಲಿನ ತೌಳವರು ಕನ್ನಡದ ಮೇಲಿಟ್ಟಿರುವ ಭಾವನಾತ್ಮಕ ಪ್ರೀತಿ ಮೆಚ್ಚುವಂತಹದ್ದಾಗಿದೆ ಎಂದರು.

“ಪ್ರಾದೇಶಿಕ ವೈವಿಧ್ಯತೆಯೊಂದಿಗೆ ಕನ್ನಡವನ್ನು ಗಟ್ಟಿಯಾಗಿ ಉಳಿಸಿಕೊಂಡಿರುವ ನಾಡು ದಕ್ಷಿಣ ಕನ್ನಡ ಜಿಲ್ಲೆ. ಅಂದರೆ, ನಮ್ಮದು ಬಹುಸಂಸ್ಕೃತಿ, ಬಹುವೈವಿಧ್ಯತೆ ಒಳಗೊಂಡಿರುವ ನಾಡಾಗಿದೆ. ಮಕ್ಕಳಿಂದ ಕನ್ನಡ ಕಟ್ಟುವ ಕೆಲಸವಾಗಬೇಕಿದೆ” ಎಂದು ಕನ್ನಡ ಸಾಹಿತ್ಯ ಪರಿಷತ್ತ ದ ಕ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

“ಕೆಲವು ಟೀವಿ ಚಾನೆಲ್ಲುಗಳು ನಮ್ಮ ರಾಜ್ಯ ಅನಾಹುತಗಳಿಂದ ಮುಳುಗಿ ಹೋಗಿತೋ ಎಂಬಂತೆ ಬಿಂಬಿಸುತ್ತಿವೆ. ಟೀವಿ ಮಾಧ್ಯಮಗಳಲ್ಲಿ ವಿಕೃತ ಅನಾಹುತಗಳ ಅತಿಯಾದ ವೈಭವೀಕರಣದಿಂದ ಸುಕೃತ ವಿಷಯಗಳ ಪ್ರಚಾರ ಗೌಣವಾಗಿದೆ. ಇಂದಿನ ಶಾಲೆಗಳ ಸ್ಥಿತಿ ಉತ್ತಮವಾಗಿದ್ದರೂ ಮೂಲಭೂತ ಸೌಕರ್ಯಗಳಿಲ್ಲದೆ ಅವು ಕೊರಗುತ್ತಿವೆ. ಇಂಗ್ಲಿಷ್ ಇಂದಿನ ಅಗತ್ಯವೆಂಬುದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ ಕನ್ನಡದ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಕನ್ನಡದ ಜೊತೆಗೆ ಕನ್ನಡದೊಂದಿಗೆ ಇಂಗ್ಲಿಷ್ ಕಡ್ಡಾಯಗೊಳಿಸಿದಲ್ಲಿ ಮಕ್ಕಳಿಂದಲೇ ಕನ್ನಡ ಜಾಗೃತವಾಗಲಿದೆ ಎಂಬ ವಿಶ್ವಾಸ ನಮಗಿದೆ” ಎಂದವರು ಅಭಿಪ್ರಾಯಪಟ್ಟರು.

ಕನ್ನಡ ಸಮ್ಮೇಳನಗಳು ಸಾಹಿತ್ಯ ಸಮ್ಮೇಳನಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಇದರಲ್ಲಿ ಪ್ರಾದೇಶಿಕ ಭಾಷಿಗರೂ ಇದ್ದಾರೆ. ನಾವೀಗ ಕನ್ನಡದ ಬಗೆಗೆ ನಕಾರಾತ್ಮಕ ವಿಷಯಗಳ ಬದಲಿಗೆ ಸಕಾರಾತ್ಮಕ ಚಿಂತನೆ ಮಾಡಬೇಕಿದೆ. ಇದು ಕನ್ನಡ ಕಟ್ಟುವ ಕೆಲಸವಾಗಬೇಕು ಎಂದು ಮಂಗಳೂರು ಆಕಾಶವಾಣಿ ನಿವೃತ್ತ ಅಧಿಕಾರಿ ವಸಂತಕುಮಾರ ಪೆರ್ಲ ನುಡಿದರು. ಆರಂಭದಲ್ಲಿ ಶಾಸಕ ಮೊೈದಿನ್ ಬಾವಾ, ಈ ಪರಿಸರದ ಜನರ ಕನ್ನಡ ಅಭಿಮಾನದ ಬಗ್ಗೆ ಸಮಯೋಚಿತ ಮಾತನ್ನಾಡಿದರು

g-3

ಇಲ್ಲಿನ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಸಕಾಲಿಕ ಮಾತುಗಳೊಂದಿಗೆ ಅಧ್ಯಕ್ಷೀಯ ಮಾತು ಆರಂಭಿಸಿದ ಸಮ್ಮೇಳನಾಧ್ಯಕ್ಷೆ ಚಂದ್ರಕಲಾ ನಂದಾವರ, “ಇಂದಿನ ಜಾಗತೀಕರಣ, ಖಾಸಗೀಕರಣ, ಉದಾರೀಣಿಕರಣ ಜನರಿಗೆ ಮೇಲ್ನೋಟಕ್ಕೆ ಬಹಳಷ್ಟು ಸ್ವಾತಂತ್ರ್ಯ ನೀಡಿದೆ ಎಂದನ್ನಿಸುತ್ತಿದೆ. ಆದರೆ ಅದರ ಅಂತರಂಗದಲ್ಲಿ ಗುಪ್ತವಾಗಿ ಹರಿಯುವ ಗುಲಾಮಿತನದ ಶಕ್ತಿ ಸಮಾಜಮುಖೀ ಚಿಂತನೆಗಳಿಂದ ದೂರವಾಗಿರುವ ಬಹುಸಂಖ್ಯಾತ ಮಂದಿಗೆ ಅರಿವಾಗಲು ಸಾಧ್ಯವಿದೆ. ಯಾಕೆಂದರೆ ಅದರ ಆಕರ್ಷಣೆ ಸೀತೆಯೆದುರಿನ ಮಾಯಾ ಜಿಂಕೆಯಂತೆ” ಎಂದು ಮಾರ್ಮಿಕವಾಗಿ ನುಡಿದರು.

ಸಾಮಾಜಿಕ ಬದುಕು ನೆಮ್ಮದಿ ಕಾಣದಿದ್ದಾಗ ಸಾಹಿತ್ಯದ ಸೃಷ್ಟಿಯಲ್ಲಿ ಸಂತೋಷ, ಸಂಭ್ರಮ ಇರಲು ಸಾಧುವಿಲ್ಲ. ಸಾಹಿತಿಗಳು ಶೂನ್ಯದಲ್ಲಿ ಬರೆಯಲಾರರು. ಅದಕ್ಕೂ ಒಂದು ನಿರ್ದಿಷ್ಟ ಪರಿಸರ ಅಗತ್ಯವಿದೆ ಎಂದವರು, ಪ್ರಸಕ್ತ ಕನ್ನಡ ಸಾಹಿತ್ಯ ಪ್ರಪಂಚದ ಆಗುಹೋಗಗಳ ಹಿನ್ನೆಲೆಯಲ್ಲಿ ಅತ್ಯಂತ ಮಾರ್ಮಿಕವಾಗಿ ನುಡಿದರು.

ಬಳಿಕ ಸ್ಥಳೀಯ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಗುರುಪುರ ಕಾಲೇಜು ಪ್ರಾಂಶುಪಾಲ ವಾಸುದೇವ ಕಾಮತ್ ಶಾಲಾ-ಕಾಲೇಜು ವಿದ್ಯಾರ್ಥಿಗಳ ಆಯ್ದ `ಇಬ್ಬನಿ’ ಕವನ ಸಂಕಲನ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಸ್ಥಳೀಯ ರಾಜಕೀಯ ನಾಯಕರಾದ ಸಚಿನ್ ಅಡಪ, ಉದಯಕುಮಾರ್ ಭಟ್, ಯು ಪಿ ಇಬ್ರಾಹಿಂ, ಗ್ರಾಪಂ ಅಧ್ಯಕ್ಷೆ ರುಕಿಯಾ ಹಾಗೂ ಅಬ್ದುಲ್ ಮಜೀದ್ ದಾರಿಮಿ ಕುಂಬ್ರ, ಜಯಲಕ್ಷ್ಮೀ ಮೊದಲಾದವರು ಇದ್ದರು. ಪದ್ಮನಾಭ ಭಟ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

g-1

ನಂತರ ನಿವೃತ ಪ್ರಾಧ್ಯಾಪಕ ದಿನೇಶ್ ಪೈ ಗುರುಪುರ `ಇತಿಹಾಸ-ವರ್ತಮಾನ ; ಅವಲೋಕನ’ ಮಾಡಿದರು. ವೇದಿಕೆಯಲ್ಲಿ ಸುಮನಾ ಎಚ್ ಸಿ ಉಪಸ್ಥಿತರಿದ್ದರು. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ ಆಶೀರ್ವಚನ ನೀಡಿದರು. ಮಧ್ಯಾಹ್ನ ವಿದ್ಯಾರ್ಥಿ ಕವಿಗೋಷ್ಠಿ ಮತ್ತು ಹಿರಿಯರ ಕವಿಗೋಷ್ಠಿ ನಡೆಯಿತು. ಹಿರಿಯರ ಗೋಷ್ಠಿಯಲ್ಲಿ ಶೈಲಜಾ ಪದುಕೋಳಿ, ರೂಪಕಲಾ ಆಳ್ವ, ಬದ್ರುದ್ದಿನ್ ಕೂಳೂರು, ಎಡ್ವರ್ಡ್ ಲೋಬೋ ತೊಕ್ಕೊಟ್ಟು, ಧನಂಜಯ ಗುರ್ಪುರ ಕವನ ವಾಚಿಸಿದರು. ಕವಿ ಎನ್ ಪಿ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸಮ್ಮೇಳನದ ಕೊನೆಯ ಹಂತದಲ್ಲಿ ಜಿ ಟಿ ಅಣ್ಣು ಭಟ್, ಹೊಸಬೆಟ್ಟು ಗುರುರಾಜ ಆಚಾರ್, ವೇದಾವತಿ, ಕುಳವೂರು ನಾರಾಯಣ ಪೂಜಾರಿ, ಯಾದವ್ ಸಾಲ್ಯಾನ್, ಉಸ್ಮಾನ್ ಕಲ್ಲಾಪು ಸುಬ್ಬಲಕ್ಷ್ಮೀ, ಸದಾನಂದ ಹೆಗಡೆಕಟ್ಟೆ, ಗುರುವಪ್ಪ ಪೂಜಾರಿ ಕೆದುಬರಿ, ರಫೀಕ್ ಗುರುಪುರ, ಸ್ಟೀಫನ್ ಕ್ವಾಡ್ರಸ್ಸಿಗೆ ಸನ್ಮಾನ ನಡೆಯಿತು. ನಿತ್ಯಾನಂದ ಕಾರಂತ ಸಮಾರೋಪ ಭಾಷಣ ಮಾಡಿದರು. ರಘು ಇಡ್ಕಿದು ಕಾರ್ಯಕ್ರಮ ನಿರೂಪಿಸಿದರೆ, ವಿಜಯಲಕ್ಷ್ಮೀ ಶೆಟ್ಟಿ ವಂದನಾರ್ಪಣೆ ಗೈದರು. ಕಾರ್ಯಕ್ರಮದ ಯಶಸ್ವಿಗೆ ಕಿಟ್ಟಣ್ಣ ರೈ, ಸದಾಶಿವ ಶೆಟ್ಟಿ, ಪುರುಷೋತ್ತಮ ಮಲ್ಲಿ ಹಾಗೂ ಇತರರು ಶ್ರಮಿಸಿದ್ದರು.

By suddi9

Leave a Reply

Your email address will not be published. Required fields are marked *