ಕೈಕಂಬ: “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು”, “ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ” ಎಂಬ ಉದ್ದೇಶದಿಂದ ಕುಪ್ಪೆಪದವು ಗ್ರಾಮದ 2016 -17 ನೇ ಸಾಲಿನ ಮಕ್ಕಳ ವಿಶೇಷ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಲೀಲಾವತಿ ಅವರ ಅದ್ಯಕ್ಷತೆಯಲ್ಲಿ, ದ.ಕ.ಹಿ.ಪ್ರಾ.ಶಾಲೆ ಕಲ್ಲಾಡಿಯಲ್ಲಿ ಪ್ರಜ್ಞಾ ಸಲಹಾ ಕೇಂದ್ರದ ಸಹಯೋಗದೊಂದಿಗೆ ಜರಗಿತು.
ಗ್ರಾಮ ಸಭೆಯಲ್ಲಿ ಕಲ್ಲಾಡಿ ಪ್ರೌಢ ಶಾಲೆ, ಆಚಾರಿಜೋರ, ಕಿಳೆಂಜಾರು ಸರಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮವು ಶಾಲಾ ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಸಭೆಯಲ್ಲಿ ಮಕ್ಕಳ ಹಕ್ಕು, ಮಕ್ಕಳ ಕರ್ತವ್ಯ ಹಾಗೂ ಮಕ್ಕಳ ಗ್ರಾಮ ಸಭೆಯ ಕುರಿತು ಪ್ರಜ್ಞಾ ಸಲಹಾ ಕೇಂದ್ರ ಕೈಕಂಬ ವಲಯದ ಕಾರ್ಯಕರ್ತ ಈಶ್ವರ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಆರೋಗ್ಯ ಇಲಾಖೆಯಿಂದ ಪ್ರದೀಪ್ ಉಪಸ್ಥಿತರಿದ್ದು 5 ರಿಂದ 15 ವರ್ಷದ ಮಕ್ಕಳಿಗೆ ರುಬೆಲ್ಲಾ ವಿರುಧ್ಧ ಲಸಿಕೆ ನೀಡುವ ಕಾರ್ಯಕ್ರಮದ ಬಗ್ಗೆ ತಿಳಿಸಿದರು ಹಾಗೂ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಕರೆನೀಡಿದರು.
ಪೋಲೀಸ್ ಇಲಾಖೆಯಿಂದ ಲಾವನಿರವರು ಆಗಮಿಸಿ ಮಕ್ಕಳ ಕಳ್ಳತನ, ಮಕ್ಕಳ ರಕ್ಷಣೆ, ಹಾಗೂ ಪೋಕ್ಷೋ ಕಾಯಿದೆ ಕುರಿತು ಮಾಹಿತಿ ನೀಡಿದರು ಅಲ್ಲದೇ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು

ಸಭೆಯಲ್ಲಿ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ನವೀನ್ ಬಿ.ಸಿ.ಉಪಾದ್ಯಕ್ಷ ಡಿ.ಪಿ ಹಮ್ಮಬ್ಬ, ಪಂಚಾಯತ್ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದು ಮಕ್ಕಳು ಮುಂದಿಟ್ಟ ಮನವಿಗಳಿಗೆ ಸ್ಪಂದಿಸಿದರು. ಮಕ್ಕಳು ನೀರಿನ ಅಭಾವ, ಶೌಚಾಲಯ, ರಸ್ತೆ ಹಾಗೂ ರಕ್ಷಣೆಯ ಕುರಿತು ಮನವಿ ಸಲ್ಲಿಸಿದರು. ವೈಯಕ್ತಿಕ ಹಾಗೂ ಶಾಲಾ ಸಮಸ್ಯೆಗಳು ಇದರಲ್ಲಿ ಒಳಗೊಂಡಿತ್ತು.

ಕಿಳಿಂಜಾರು ಶಾಲಾ ಮಕ್ಕಳು “ಶಾಲೆಯ ಮಹತ್ವ” ಮತ್ತು “ಬಾಲ ಕಾರ್ಮಿಕ ಪದ್ದತಿ ಕುರಿತು” ಹಾಗೂ ಕಲ್ಲಾಡಿ ಶಾಲಾ ಮಕ್ಕಳು “ಬಾಲ್ಯ ವಿವಾಹದ ಕೆಡುಕುಗಳ” ಕುರಿತು ಕಿರು ಪ್ರಹಸನ ಪ್ರದರ್ಶಿಸಿದರು. ಪಂಚಾಯತ್ ಸಿಬ್ಬಂದಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಜ್ಞಾ ಸಲಹಾ ಕೇಂದ್ರದ ಕಾರ್ಯಕರ್ತರು ಹಾಗೂ ಶಿಕ್ಷಕ ವೃಂದದವರು ಸಭೆಯಲ್ಲಿ ಉಪಸ್ಥಿತರಿದ್ದರು.

