ಕಾನ್ಪುರ: ಇಂಧೋರ್-ಪಟನಾ ಎಕ್ಸ್ಪ್ರೆಸ್ ರೈಲು ದುರಂತದ ಗಾಯ ಆರುವ ಮುನ್ನವೇ ಉತ್ತರ ಪ್ರದೇಶದ ಕಾನ್ಪುರ ಸಮೀಪ ಮತ್ತೊಂದು ರೈಲು ದುರಂತ ಸಂಭವಿಸಿದೆ. ಅಜ್ಮೀರ್-ಸಿಯಾಲ್ಡಾಹ್ ಎಕ್ಸ್ಪ್ರೆಸ್ ರೈಲು ಕಾನ್ಪುರ ಸಮೀಪದ ರೂರಾ ಪ್ರದೇಶದಲ್ಲಿ ಹಳಿ ತಪ್ಪಿದ್ದು, ಇಬ್ಬರು ಮೃತಪಟ್ಟಿದ್ದಾರೆ. 28 ಮಂದಿ ಗಾಯಗೊಂಡಿದ್ದಾರೆ. ಕಾನ್ಪುರದಿಂದ 70 ಕಿ.ಮೀ. ದೂರದಲ್ಲಿ ಕಣಿವೆಯೊಂದರ ಮೇಲೆ ಸಾಗುವ ಸಂದರ್ಭ ಹಳಿ ತಪ್ಪಿದೆ.ಕಾನ್ಪುರರಿಂದ 50 ಕಿ.ಮೀ ದೂರದಲ್ಲಿರುವ ದೇಹತ್’ನಲ್ಲಿ ಮುಂಜಾನೆ 5.20ಕ್ಕೆ ಘಟನೆ ಸಂಭವಿಸಿದೆ ಎಂದು ಕಾನ್ಪುರದ ರೈಲು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ದೇಹತ್’ನ ರೂರಾ-ಮೀರತ್ ನಡುವೆ ಸಂಚರಿಸುತ್ತಿದ್ದ ಸೇಲ್ದ-ಅಜ್ಮೇರ್ ಎಕ್ಸ್’ಪ್ರಸ್ ರೈಲಿನ 15 ಬೋಗಿಗಳು ಹಳಿ ತಪ್ಪಿದ ಪರಿಣಾಮ ಇಬ್ಬರು ಮೃತಪಟ್ಟು, 40 ಮಂದಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು, ರೈಲಿನೊಳಗಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಜಿಲ್ಲಾಡಳಿತ ಹಾಗೂ ರೈಲ್ವೆ ಅಧಿಕಾರಿಗಳು ಪರಿಹಾರ ಹಾಗೂ ನೆರವು ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಆದಾಗ್ಯೂ ಹೆಚ್ಚಿನ ಪರಿಹಾರ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಲಿವೆ. ಗಾಯಗೊಂಡವರಿಗೆ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ. ಆ ರೈಲಿನಲ್ಲಿ ಪ್ರಯಾಣಿಸುತ್ತಿರುವವರನ್ನು ಬೇರೆ ರೈಲಿಗೆ ಸ್ಥಳಾಂತರಿಸಲಾಗಿದೆ ಜೊತೆಗೆ ಅಪಘಾತಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆಯನ್ನು ಆದೇಶಿಸಲಾಗಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಟ್ವಿಟ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಕಳೆದ ತಿಂಗಳು ಕಾನ್ಪುರ ಸಮೀಪ ಇಂಧೋರ್-ಪಟನಾ ಎಕ್ಸ್ಪ್ರೆಸ್ ಭೀಕರ ರೈಲು ದುರಂತ ಸಂಭವಿಸಿತ್ತು. 127 ಮಂದಿ ಪ್ರಾಣ ಕಳೆದುಕೊಂಡಿದ್ದರು. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ರೈಲ್ವೆ ಇಲಾಖೆ ಗಾಯಗೊಂಡವರ ನೆರವಿಗಾಗಿ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು, ಸಂಬಂಧಿಸಿದವರು: 09935024350 ಹಾಗೂ 0979485953 ಸಂಪರ್ಕಿಸಬಹುದು.

