ಮೂಡುಬಿದಿರೆ : ವಿದ್ಯೆ ಪ್ರತಿಯೊಬ್ಬರಿಗೂ ಅಗತ್ಯವಾಗಿ ಬೇಕು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗದ ಜತೆಗೆ ಹೆತ್ತವರ ಮಾರ್ಗದರ್ಶನ ಪ್ರೋತ್ಸಾಹವೂ ಅಗತ್ಯವಾಗಿ ಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ ಹೇಳಿದರು.
ಅವರು ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಹಿಂದೆ ಶಿಕ್ಷಕ ವೃತ್ತಿಗೆ ಹೆಚ್ಚಿನ ಗೌರವ ಇತ್ತು ಆದರೆ ಇಂದಿನ ಕಾಲಘಟ್ಟದಲ್ಲಿ ಶಿಕ್ಷಕರ ಮಕ್ಕಳು ಶಿಕ್ಷಕರಾಗಲು ಒಪ್ಪದಿರುವುದು ಸಮಾಜಕ್ಕೆ ದೊಡ್ಡ ಪೆಟ್ಟಾಗಿ ಪರಿಣಮಿಸಿರುವುದರಿಂದ ಅನಿವಾರ್ಯವಾಗಿ ಬೇರೆ ವೃತ್ತಿಗಳನ್ನು ಅವಲಂಬಿಸಿದ್ದಾರೆಂದು ವಿಷಾಧವ್ಯಕ್ತಪಡಿಸಿದರು.
ಇನ್ನೊರ್ವ ಮುಖ್ಯ ಅತಿಥಿ ಎ.ಜಿ.ಸೋನ್ಸ್ ಐ.ಟಿ.ಐ ನ ಪ್ರಾಂಶುಪಾಲ ಜಯರಾಮ್ ಶೆಟ್ಟಿಗಾರ್ ಮಾತನಾಡಿ ಪ್ರೌಢ ಶಿಕ್ಷಣ ಜೀವನದ ಅತ್ಯುತ್ತಮ ಘಟ್ಟನೀ ಶಿಕ್ಷಣದಿಂದ ಸಂಸ್ಕಾರಯುತ ನಾಗರಿಕರಾಗಲು ಸಾಧ್ಯವಿದೆ. ನಾವಿಂದು ಆಧುನಿಕ ತಾಂತ್ರಿಕ ಜಗತ್ತಿನಲ್ಲಿದ್ದೇವೆ. ವಿದ್ಯಾರ್ಥಿಗಳ ಜೀವನಕ್ಕೆ ಮಾರಕವಾಗುವಂತಹ ಅನೇಕ ಅಂಶಗಳಿವೆ. ಇವುಗಳ ಬಗ್ಗೆ ಜಾಗೃತರಾಗಬೇಕಾಗಿದೆ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ರಾಮ್ನಾಥ್ ಭಟ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ 100 ವಿದ್ಯಾರ್ಥಿಗಳಿಗೆ ಶುಲ್ಕವಿಲ್ಲದೆ ಶಿಕ್ಷಣವನ್ನು ನೀಡುತ್ತಿರುವ ಈ ಶಾಲೆಯು ಮುಂದಿನ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಈ ಬಗ್ಗೆ ಹೆತ್ತವರು ಮತ್ತು ಶಾಲೆಯ ಹಳೆ ವಿದ್ಯಾರ್ಥಿಗಳು ಯಾವ ರೀತಿಯಾಗಿ ಆಚರಿಸಿಕೊಳ್ಳುವುದೆಂಬ ಬಗ್ಗೆ ನಿರ್ಣಯ ಮಾಡಬೇಕಾಗಿದೆ ಹಾಗೂ ಎಲ್ಲರ ಸಹಕಾರವನ್ನೂ ಆಡಳಿಯ ಮಂಡಳಿಯು ಬಯಸುತ್ತದೆ ಎಂದು ಹೇಳಿದರು.
ಶಾಲೆಯ ಹಳೆ ವಿದ್ಯಾರ್ಥಿ ಸುಧೀಶ್ ಕುಮಾರ್ ಸ್ವಸ್ತಿ ವಾಚನಗೈದರು. ಆಡಳಿತ ಮಂಡಳಿಯ ಸದಸ್ಯರಾದ ಪಿ.ಎಸ್.ಭಟ್, ನಾರಾಯಣ.ಪಿ ಮತ್ತು ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು. ಶಿಕ್ಷಕ ಜನಾರ್ಧನ ನಾಯ್ಕ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಪದ್ಮಜಾ ವಾರ್ಷಿಕ ವರದಿ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ಕಳೆದ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದವರಿಗೆ, ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಅಧ್ಯಾಪಕಿ ತೆರೆಝಾ ಕರ್ಡೋಜ ಬಹುಮಾನಿತರ ವಿವಿರ ನೀಡಿದರು. ಶಿಕ್ಷಕ ವೆಂಕಟ್ರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಸುಶಾಂತ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಶಾಲೆಯ ಹಳೆ ವಿದ್ಯಾರ್ಥಿ, ರೋಟರಿ ಕ್ಲಬ್ ಟೆಂಪಲ್ ಟೌನ್ನ ಅಧ್ಯಕ್ಷ ರಾಜೇಶ್ ಬಂಗೇರಾ ಧ್ವಜಾರೋಹಣಗೈದರು.

