ಮೂಡುಬಿದಿರೆ: ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ನಮಗೆಲ್ಲರಿಗೂ ದೇವರು ಸರಿಯಾದ ಅಂಗಾಂಗಗಳನ್ನು ನೀಡಿದ್ದಾರೆ. ಆದರೆ ಕೆಲವು ಮಕ್ಕಳಿಗೆ ನೂನ್ಯತೆಯನ್ನು ನೀಡಿದ್ದಾರೆ. ನೂನ್ಯತೆಯನ್ನು ಹೊಂದಿರುವ ಮಕ್ಕಳು ಸಮಾಜಕ್ಕೆ ಬಂದಾಗ ಅದು ದೌರ್ಬಲ್ಯ ಆಗದಂತೆ ಎಚ್ಚರವಹಿಸಬೇಕು ಎಂದು ಶಾಸಕ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮೂಡುಬಿದಿರೆ ವಲಯ ಇವುಗಳ ವತಿಯಿಂದ ಮಂಗಳವಾರ ಸಮಾಜಮಂದಿರದಲ್ಲಿ ನಡೆದ ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ನ ಫಿಸಿಯೋಥೆರಫಿಸ್ಟ್ ಡಾ.ಸೆಲಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಫಿಸಿಯೋಥೆರಫಿ ವಿಭಾಗದ ವಿದ್ಯಾರ್ಥಿನಿ ಸುಮಯಾ ಬಾನು ಮಾತನಾಡಿ ವಿಕಲಚೇತನ ಮಕ್ಕಳನ್ನು ನೋಡಿಕೊಳ್ಳುವ ಹೆತ್ತವರು ಮತ್ತು ಶಿಕ್ಷಣ ನೀಡುವ ಶಿಕ್ಷಕರು ಹಾಗೂ ಚಿಕಿತ್ಸೆ ನೀಡುವ ವರ್ಗಕ್ಕೆ ಹೆಚ್ಚಿನ ತಾಳ್ಮೆ ಮತ್ತು ಸಹನೆಯ ಅಗತ್ಯವಿದ್ದು ಇದನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ವಿಕಲಚೇತನ ಮಕ್ಕಳಿಗೆ ಫಿಸಿಯೋಥೆರಫಿ ಚಿಕಿತ್ಸಾ ವಿಧಾನದಿಂದ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗಳಾಗುತ್ತಿವೆ ಎಂದು ಹೇಳಿದರು.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಯರಾಮ್ ರಾವ್, ಸಮನ್ವಯಾಧಿಕಾರಿ ರಮೇಶ್ ಆಚಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ ಸ್ವಾಗತಿಸಿದರು. ಸಿಆರ್ಪಿ ಸ್ಟ್ಯಾನಿ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ನೋಡೆಲ್ ಅಧಿಕಾರಿ ಗೀತಾ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ವಿಶೇಷ ಚೇತನರ ಪ್ರಚಾರ ಮತ್ತು ಜಾಗೃತಿ ಶಿಬಿರದಂಗವಾಗಿ ಹೆತ್ತವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಳ್ವಾಸ್ ಫಿಸಿಯೋಥೆರಫಿ ವಿಭಾಗದ ವಿದ್ಯಾರ್ಥಿಗಳು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು.

