ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ವಿದಾಯ ಕೂಟವು ವಿದ್ಯಾಗಿರಿಯ ವಿಚಾರಸಂಕಿರಣದ ಸಭಾಂಗಣದಲ್ಲಿ ಸಂಪನ್ನಗೊಂಡಿತು.
ಆಯುರ್ವೇದದ ಸ್ನಾತಕೋತ್ತರ ವಿಭಾಗದ 11 ಪ್ರತ್ಯೇಕ ವಿಭಾಗಗಳಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪೂರೈಸಿದ ದೇಶದ ನಾನಾರಾಜ್ಯಗಳ 50 ವಿದ್ಯಾರ್ಥಿಗಳಿಗೆ ಶುಭವಿದಾಯವನ್ನು ನೀಡುವ ಬೀಳ್ಕೊಡುಗೆ ಕಾರ್ಯಕ್ರಮ `ಸಂಪನ್ನಮ್’ ವೃತ್ತಿ ಜೀವನಕ್ಕೆ ಹೊಸ ಆಯಾಮವನ್ನೂ, ಬದುಕಿಗೆ ತೃಪ್ತಿ-ನೆಮ್ಮದಿಯನ್ನೂ, ಸಮಾಜಕ್ಕೆ ಬದ್ಧತೆಯನ್ನೂ ನೀಡುವಲ್ಲಿ ಈ ವೈದ್ಯ ವಿದ್ಯಾರ್ಥಿಗಳು ಮಹೋನ್ನತಿಯನ್ನು ಸಾಧಿಸಲೆಂಬ ಸದಾಶಯವನ್ನು ಕೋರಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿವಿವೇಕ್ ಆಳ್ವ ಮಾತನಾಡಿ, ಕಲಿತ ವಿದ್ಯೆಯ ಬಗ್ಗೆ ಗೌರವ ಮತ್ತು ಹೆಮ್ಮೆ, ವೃತ್ತಿಯ ಬಗ್ಗೆ ಗೌರವ, ಸಮಾಜಪರ ಕಾಳಜಿ, ಬದುಕಿನ ಬಗ್ಗೆ ಬದ್ಧತೆ, ನಿರಂತರ ಶ್ರದ್ಧೆ, ಪ್ರಯೋಗ ಪರಿಣತಿಯ ಜೊತೆಗೆ ಕಾಲಕಾಲಕ್ಕೆ ಸಂಶೋಧನೆಯನ್ನು ಮೈಗೂಡಿಸಿಕೊಂಡು ವೃತ್ತಿ ವ್ಯವಸಾಯವನ್ನು ಶಿಸ್ತಿನಿಂದ ಪಾಲಿಸಿದ್ದೇ ಆದಲ್ಲಿ ಉತ್ತಮ ಭವಿಷ್ಯದ ಸಾಕಾರ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಮಂಜೀತ್ ಪಟೇಲ್(ಗುಜರಾತ್) ಮತ್ತು ಡಾ.ಶಿಲ್ಪಾ(ಕರ್ನಾಟಕ) ಕಾಲೇಜು ಜೀವನದ ಕುರಿತು ಮಾತನಾಡಿದರು.
ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಬಿ ವಿನಯಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಬದುಕು ಕಟ್ಟಿಕೊಳ್ಳುವಲ್ಲಿ ಕಾಲೇಜುವಹಿಸುವ ಪಾತ್ರ, ಬದುಕಿಗೆ ಅರ್ಥ ತುಂಬುವ ಉಪನ್ಯಾಸಕ ವೃಂದ ಮತ್ತು ಜೀವನದ ಮಣೆಯಮೇಲೆ ಚಿತ್ತಾರ ಚೆಲ್ಲುವ ಸಹಪಾಠಿಗಳು ಮತ್ತು ಒಡನಾಡಿಗಳ ಸಹವಾಸ ಇವುಗಳಬಗ್ಗೆ ವಿವರಣೆ ನೀಡಿದರು.
ಸ್ನಾತಕೋತ್ತರ ಡೀನ್ ಡಾ.ಮಂಜುನಾಥ ಭಟ್ ಸ್ವಾಗತಿಸಿದರು.ಪ್ರಾಧ್ಯಾಪಕ ಡಾ.ಕೆ.ಎನ್.ರಾಜಶೇಖರ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ಎಂ.ಎಸ್.ಕೃಷ್ಣಮೂರ್ತಿ ವಂದಿಸಿದರು. ಕಾಲೇಜಿನ ಉಪ ಆಡಳಿತಾಧಿಕಾರಿ ಜೋಬಿನ್ ಹಾಗೂ ಸ್ನಾತಕೋತ್ತರ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

