ಬಂಟ್ವಾಳ: ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಡಿಸೆಂಬರ್ 9ರಿಂದ 13ರವೆರೆಗೆ ನಡೆಯಲಿರುವ ‘ವಿಶ್ವ ತುಳುವರೆ ಆಯೊನೊ-2016’ ಇದರ ಪ್ರಚಾರಾರ್ಥವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ‘ತುಳುವತೇರ್’ ಸೋಮವಾರ ಬಿ.ಸಿ.ರೋಡ್ ಗೆ ಆಗಮಿಸಿತು. ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮೆರವಣಿಗೆಯನ್ನು ಬರಮಾಡಿಕೊಂಡರು. ಬಳಿಕ ಹೆದ್ದಾರಿಯಲ್ಲಿ ಸಾಗಿದ ತುಳುವ ತೇರ್ ನ ಮೆರವಣಿಗೆ ಬಿ.ಸಿ.ರೋಡು ರಂಗಮಂದಿರದವರೆಗೆ ಸಾಗಿಬಂತು.

ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ ಶೆಟ್ಟಿಯವರು , ತುಳು ಭಾಷೆಯ ಬಗ್ಗೆ ನಿರಂತರವಾದ ಅಭಿಮಾನವನ್ನು ಬೆಳೆಸಿಕೊಳ್ಳಬೇಕು, ಅದರ ವೈಶಿಷ್ಟ್ಯವನ್ನು ಸಾರುವುದರ ಜೊತೆಗೆ ಅದರ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದ ಅವರು, ವಿಶ್ವ ತುಳುವೆರೆ ಆಯೊನೊ-2016 ದಲ್ಲಿ ಭಾಗವಹಿಸಿ ಯಶಸ್ಸುಗೊಳಿಸುವಂತೆ ಕರೆ ನೀಡಿದರು. ಬಂಟ್ವಾಳ ತುಳು ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಸಭಾಧ್ಯಕ್ಷತೆ ವಹಿಸಿದ್ದರು.

ವಿಶ್ವ ತುಳುವೆರೆ ಆಯೊನೊದ ಸಂಚಾಲಕ ಭಾಸ್ಕರ್ ಪೂಜಾರಿ ಕುಂಬ್ಳೆ ಯವರು ಪ್ರಸ್ತಾವಿಕವಾಗಿ ಮಾತನಾಡಿ, ವಿಶ್ವ ತುಳುವೆರೆ ಆಯೊನೊ 2016 ಕಾರ್ಯಕ್ರಮ 5 ದಿನಗಳ ಕಾಲ ನಡೆಯಲಿದ್ದು ಈ ಸಂದರ್ಭದಲ್ಲಿ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಮೊದಲಾದ ಸಭೆ, ಗೋಷ್ಠಿಗಳು ನಡೆಯಲಿದೆ. ಜೊತೆಗೆ ತುಳುನಾಡಿನ ದೈವಾರಾಧನೆ ಬಗ್ಗೆ ವಿಚಾರ ವಿಮರ್ಶೆ, ತುಳುನಾಡಿನಲ್ಲಿರುವ ಎಲ್ಲ ಭಾಷೆಗಳ ಬಹು ಭಾಷೆ ಸಂಗಮವು ನಡೆಯುವುದು.

ತುಳುನಾಡಿನಾದ್ಯಂತ ವಿಶ್ವ ತುಳುವೆರೆ ಆಯೊನೊದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತುಳುವ ತೇರ್ ಬಾರ್ಕೂರ್ ತುಳುವೇಶ್ವರ ದೇವಸ್ಥಾನದಿಂದ ಹೊರಟಿದ್ದು 108 ದಿನಗಳ ಕಾಲ ತುಳು ನಾಡಿನಾದ್ಯಂತ ಸಂಚಾರಿಸಿ ಡಿಸೆಂಬರ್ 9ರಂದು ಬದಿಯಡ್ಕವನ್ನು ತಲುಪಲಿದೆ ಎಂದರು.

ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಂಗಳೂರು ತುಳು ಆಯೊನೊದ ಸಮಿತಿ ಪ್ರಮುಖರಾದ ರಾಜ್ಗೋಪಾಲ್ ವರ್ಮ, ಪುರಸಭಾ ಸದಸ್ಯ ಸದಾಶಿವ ಬಂಗೇರ, ತುಳು ಆಯೊನೊದ ಪದಾಧಿಕಾರಿ ಶ್ರೀನಾಥ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿದರು. ತುಳು ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ವಂದಿಸಿದರು. ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರ್ವಹಿಸಿದರು.
ದೀಪ ಉರಿಯಲೇ ಇಲ್ಲ..!
ಸಭಾಕಾರ್ಯಕ್ರಮವನ್ನು ಉದ್ಘಾಟಿಸಬೇಕಾಗಿದ್ದ ಸಚಿವ ಬಿ.ರಮಾನಾಥ ರೈ ಯವರು ಮಂಗಳೂರಿನಲ್ಲಿ ಗೃಹಸಚಿವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರಣದಿಂದ ತುಳು ಆಯೊನೊದ ಸ್ವಾಗತ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಆದರೆ ಸಭಾ ಕಾರ್ಯಕ್ರಮ ಆರಂಭಿಸಿದರಾದರೂ ಸಚಿವರೇ ದೀಪ ಬೆಳಗಿಸಬೇಕೆಂದು ಸಂಘಟಕರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ದೀಪ ಬೆಳಗಿಸದೇ ಕಾರ್ಯಕ್ರಮ ನಡೆಸಿದರು. ಸ್ವಾಗತ, ಪ್ರಸ್ತಾವನೆ, ಅತಿಥಿಗಳ ಭಾಷಣ, ಧನ್ಯವಾದ ಮುಗಿದು, ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾದರೂ ಸಚಿವರ ಆಗಮನವಾಗಲೇ ಇಲ್ಲ.. ಬಳಿಕ ಜಿಲ್ಲಾಪಂಚಾಯತ್ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಯವರು ದೀಪಬೆಳಗಿಸಿದರು.
