ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ಪೊಲೀಸರ ತಂಡ ದಾಳಿ ನಡೆಸಿದ ವೇಳೆ ಹೆದರಿ ನದಿಗೆ ಹಾರಿದ ಮರಳುಗಾರಿಕೆಯ ಕಾರ್ಮಿಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ತಾಲೂಕಿನ ಮುಲ್ಲರಪಟ್ಣದ ಫಲ್ಗುಣಿ ನದಿಯಲ್ಲಿ ನಡೆದಿದೆ.


ಮೃತ ಮರಳು ಕಾರ್ಮಿಕನನ್ನು ಸ್ಥಳೀಯ ಮುತ್ತೂರು ಮಾರ್ಗದಂಗಡಿ ನಿವಾಸಿ ಶರೀಫ್ (30) ಎಂದು ಗುರುತಿಸಲಾಗಿದೆ. ಶರೀಫ್ ನದಿಗೆ ಹಾರಿ ಮೃತಪಡಲು ಪೊಲೀಸರೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣಗೊಂಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಸಹಿತ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಿಕೊಳ್ಳಲಾಯಿತು.


ಮುಲ್ಲಾರಪಟ್ನ ಫಲ್ಗುಣಿ ನದಿಯಲ್ಲಿ ಹಲವು ಸಮಯಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಎಸ್ಪಿ ಭೂಷಣ್ ಜಿ ಬೊರಾಸೆಯವರ ಸೂಚನೆಯಂತೆ ಡಿವೈಎಸ್ಪಿ ರವೀಶ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಮರಳು ಅಡ್ಡೆಗೆ ದಾಳಿ ನಡೆಸಿದ್ದರು. ಈ ಸಂದರ್ಭ ಮರಳುಗಾರಿಕೆಯಲ್ಲಿ ನಿರತರಾಗಿದ್ದ ಕಾರ್ಮಿಕರು ಹೆದರಿ ಓಡಲಾರಂಭಿಸಿದರು. ಸ್ಥಳದಲ್ಲಿದ್ದ ಶರೀಫ್ ಕೂಡ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನದಿಗೆ ಹಾರಿದ್ದ. ಆದರೆ ಈಜಲು ತಿಳಿಯದೇ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ನೀರುಪಾಲದ ಮೃತದೇಹಕ್ಕೆ ದೋಣಿಯ ಮೂಲಕ ಹುಡುಕಾಟ ನಡೆಸಿದ್ದರು. ಹಲವು ತಾಸಿನ ಬಳಿಕ ತೂಗು ಸೇತವೆಯ ಅಡಿ ಭಾಗದಲ್ಲಿ ಸ್ಥಳೀಯ ಈಜುಗಾರ ಮಹಮ್ಮದ್ ಎಂಬವರು ಮೃತದೇಹವನ್ನು ಪತ್ತೆ ಹಚ್ಚಿ ಅಗ್ನಿಶಾಮಕದಳದ ನೆರವಿನೊಂದಿಗೆ ದಡ ಸೇರಿಸಿದರು.

ಪೊಲೀಸರೇ ಕಾರಣ:
ಶರೀಫ್ ನೀರಿಗೆ ಹಾರಿ ಮೃತಪಡಲು ಪೊಲೀಸರೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆತ ಮರಳುಗಾರಿಕೆಯ ಕಾರ್ಮಿಕನಲ್ಲ. ಮರಳುಗಾರಿಕೆ ನಡೆಸುತ್ತಿರುವುದನ್ನು ನೋಡುತ್ತಿದ್ದ ವೇಳೆ ಏಕಾಏಕಿ ಪೊಲೀಸರು ದಾಳಿ ನಡೆಸಿರುವುದರಿಂದ ಹೆದರಿ ನದಿಗೆ ಹಾರಿ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಇಲ್ಲದೆ ಕೇವಲ ಪೊಲೀಸರೇ ದಾಳಿ ನಡೆಸಿದ್ದಾರೆ ಆದ್ದರಿಂದ ಪೊಲೀಸರೇ ಈ ಸಾವಿಗೆ ನೇರ ಹೊಣೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಿಗುವಿನ ವಾತವಾರಣ:
ಘಟನೆಯಿಂದ ನದಿ ತೀರದಲ್ಲಿ ಬಿಗುವುಇನ ವಾತವಾರಣ ನಿರ್ಮಾಣಗೊಂಡಿತ್ತು. ಮೃತದೇಹವನ್ನು ನೀರಿನಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲು ಅಂಬ್ಯಲೆನ್ಸ್ನ್ನು ಕರೆಸಲಾಗಿತ್ತಾದರೂ ಅದರೊಳಗೆ ಇಡಲು ಆಕ್ರೋಶಿತ ಜನರು ನಿರಾಕರಿಸಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬಾರದೆ ಶವ ಮುಟ್ಟಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಮಾಧ್ಯಮದವರನ್ನು ಹೊರತುಪಡಿಸಿ ಪೊಲೀಸರಾರು ಪೊಟೋ ಅಥವಾ ದೃಶ್ಯಗಳನ್ನು ಚಿತ್ರೀಕರಣ ನಡೆಸದಂತೆ ನಿರ್ಭಂದವನ್ನು ಹೇರಿದ್ದರು. ಮೃತದೇಹವನ್ನು ಹೊತ್ತು ತರುವ ವೇಳೆಯಂತೂ ಪೊಲೀಸರಿಗೆ ಧಿಕ್ಕಾರ ಕೂಗಿಕೊಂಡು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಎಸ್ಪಿ ಭೂಷಣ್ ಜಿ. ಬೊರಾಸೆ, ಹೆಚ್ಚುವರಿ ಎಸ್ಪಿ ವೇದಮೂರ್ತಿ, ಬಂಟ್ವಾಳ ಎಸ್ಐ ಮಂಜಯ್ಯ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ತಾಲೂಕಿನ ವಿವಿಧ ಠಾಣೆಗಳಿಂದ ಹೆಚ್ಚುವರಿ ಪೊಲೀಸರು ಮುಲ್ಲರಪಟ್ನದತ್ತ ಧಾವಿಸಿದರು.

