ಬಂಟ್ವಾಳ: ರಸ್ತೆ ಸಂಪರ್ಕ ವ್ಯವಸ್ಥೆ ಸಮರ್ಪಕವಾಗಿದ್ದಲ್ಲಿ ಆ ಭಾಗದ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಶಕ್ತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಪ್ರಮುಖ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದ್ದು ಉಳಿದ ಎಲ್ಲಾ ರಸ್ತೆಗಳ ಅಭೀವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿ. ಇದರ ನೂತನ ಅಣ್ಣಳಿಕೆ ಶಾಖೆಯನ್ನು ಇಲ್ಲಿನ ಮಹಾಗಣಪತಿ ಸೌಧದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಬಂಟ್ವಾಳ – ಮೂಡಬಿದ್ರೆ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಇಲ್ಲಿನ ವಿವಿಧ ರಸ್ತೆಗಳನ್ನು ಶೀಘ್ರದಲ್ಲೇ ಅಭಿವೃದ್ಧಿ ಗೊಳಿಸಲಾಗುವುದು. ಸಂಗಬೆಟ್ಟು-ಅಣ್ಣಳಿಕೆ ರಸ್ತೆ 4 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರು.

ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ ಮುಲಾರ್ಪಟ್ಣ – ಅರಳ ರಸ್ತೆಯನ್ನು ಅಭಿವೃದ್ಧಿ ಗೊಳಿಸಲಾಗುತ್ತಿದೆ. ಹಾಗೆಯೇ ಕರಿಮಲೆ ರಸ್ತೆಯ ಅಭಿವೃದ್ಧಿಗೆ ಅನುದಾನ ಮಂಜೂರುಗೊಂಡಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಈ ಎಲ್ಲಾ ರಸ್ತೆಗಳು ಇಲ್ಲಿನ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವುದರಿಂದ ಭವಿಷ್ಯದಲ್ಲಿ ಅಣ್ಣಳಿಕೆ ಪರಿಸರ ಅಭಿವೃದ್ಧಿ ಕೇಂದ್ರವಾಗಿ ಮಾರ್ಪಾಡುಗೊಳ್ಳಲಿದೆ ಎಂದು ಅವರು ಹೇಳಿದರು. 36 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಂಗಬೆಟ್ಟು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಅಂತಿಮ ಹಂತದಲ್ಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಈ ಪ್ರದೇಶದ ಪ್ರತೀ ಮನೆಗೂ ಕುಡಿಯುವ ನೀರು ಪೂರೈಕೆಯಾಗುವ ಮೂಲಕ ನೀರಿನ ಸಮಸ್ಯೆ ಇಲ್ಲದಂತಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಪೂಂಜ ಇದರ ಪ್ರಧಾನ ಅರ್ಚಕ ಪಿ.ಅನಂತ ಆಚಾರ್ಯ ಅವರು ಸರ್ಂದ ಪ್ರಥಮ ಠೇವಣಿ ಪತ್ರಗಳನ್ನು ಬಿಡುಗಡೆಗೊಳಿಸಿ ಆ ಬಳಿಕ ಮಾತನಾಡಿದರು. ದ.ಕ.ಕೇ.ಸ. ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ರಾಯಿ ತಾ.ಪಂ. ಸದಸ್ಯೆ ಮಂಜುಳಾ ಸದಾನಂದ, ಅರಳ ಗ್ರಾ.ಪಂ. ಅಧ್ಯಕ್ಷೆ ತುಂಗಮ್ಮ, ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ರಾಯಿ ಗ್ರಾ.ಪಂ. ಉಪಾಧ್ಯಕ್ಷೆ, ಬಂಟ್ವಾಳ ತಾಲೂಕು ಸಹಕಾರಿ ಸಂಘದ ಅಧಿಕಾರಿ ತ್ರಿವೇಣಿ ರಾವ್, ಸಿ.ಸ.ವ್ಯ. ಸಂಘದ ಉಪಾಧ್ಯಕ್ಷ ಪ್ರಭಾಕರ ಪ್ರಭು, ಆಡಳಿತ ಮಂಡಳಿಯ ನಿರ್ದೇಶಕರಾದ ಸದಾಶಿವ ಪೂಜಾರಿ, ಗುಮ್ಮಣ್ಣ ನಾಯ್ಕ, ಸತೀಶ್ ಪೂಜಾರಿ, ಸೀತಾರಾಮ ಶೆಟ್ಟಿ, ಅರುಣ ಶೆಟ್ಟಿ, ಜಗದೀಶ್ ಆಳ್ವ, ರಮೇಶ್ ಎಂ., ಸೆಲೆಸ್ತಿನಾ ಡಿಸೋಜ, ಕೇಶವ ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಖೆಗೆ ಸ್ಥಳಾವಕಾಶ ನೀಡಿದ ರಾಮಚಂದ್ರ ಶೆಟ್ಟಿಗಾರ್ ಅವರನ್ನು ಸಚಿವ ಬಿ.ರಮಾನಾಥ ರೈ ಸನ್ಮಾನಿ ಗೌರವಿಸಿದರು. ಸಿ.ಸ.ವ್ಯ.ಸಂಘದ ಸಿಬ್ಬಂದಿ ಕು. ಮಲ್ಲಿಕ ಪ್ರಾರ್ಥಿಸಿದರು. ಸಿ.ಸ.ವ್ಯ.ಸಂಘದ ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಸ್ವಾಗತಿಸಿ ಪ್ರಾಸ್ತಾವಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ವಂದಿಸಿದರು. ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳಾದ ಸಚಿನ್, ಯಶೋಧರ ಶೆಟ್ಟಿಗಾರ್, ಉಮೇಶ್ ಹಾಗೂ ಜನಾರ್ದನ ಶೆಟ್ಟಿಗಾರ್ ಅವರು ಸಹಕರಿಸಿದರು.

