ಬಂಟ್ವಾಳ: ಕಕ್ಕಿಪಾಡಿ ಗ್ರಾಮದ ಹೆಣ್ಮೂರು ಪದವು ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿಯನ್ನು ಯಾವುದೇ ಕಾರಣವಿಲ್ಲದೆ ಇನ್ನೊಂದು ಶಾಲೆಗೆ ನಿಯೋಜನೆಗೊಳಿಸಿರುವ ಶಿಕ್ಷಣಾಧಿಕಾರಿಯ ಕ್ರಮವನ್ನು ವಿರೋಧಿಸಿ ಪೋಷಕರು, ಗ್ರಾಮಸ್ಥರು ಹಾಗೂ ಗ್ರಾಮದ ಪ್ರಮುಖರು ಶುಕ್ರವಾರ ಬೆಳಗ್ಗೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹೆಣ್ಮೂರು ಶಾಲೆಯಲ್ಲಿ ಇತ್ತೀಚೆಗೆ ಖಾಸಗಿಯವರಿಂದ ನಡೆದ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ತನ್ನನ್ನು ಅಹ್ವಾನಿಸಿಲ್ಲ ಎಂಬ ನೆಪವೊಡ್ಡಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಹೆಣ್ಮೂರು ಪದವು ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ವಿಜಯ ಭಂಡಾರಿ ಅವರನ್ನು ಬೇರೆಡೆಗೆ ವರ್ಗಾವಣೆಗೊಳಿಸಲು ರಾಜಕೀಯ ಪ್ರಭಾವ ಬಳಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿಯನ್ನು 15 ದಿನಗಳ ಹಿಂದೆ ಹೆಣ್ಮೂರು ಶಾಲೆಯಿಂದ ಸಂಗಬೆಟ್ಟು ಗ್ರಾಮದ ಮುಗೇರು ಗಾಡಿಪಲ್ಕೆ ಕಿ.ಪ್ರಾ.ಶಾಲೆಗೆ ನಿಯೋಜನೆಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದರು. ಅದರಂತೆ ಮುಖ್ಯ ಶಿಕ್ಷಕಿ ಶುಕ್ರವಾರ ಗಾಡಿಪಲ್ಕೆ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ರಾಜಕೀಯ ಪ್ರಭಾವ ಬೆಳೆಸಿ ಯಾವುದೇ ಕಾರಣವಿಲ್ಲದೆ ಮುಖ್ಯ ಶಿಕ್ಷಕಿಯನ್ನು ಇನ್ನೊಂದು ಶಾಲೆಗೆ ನಿಯೋಜನೆಗೊಳಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಕಾರರು ಪರೀಕ್ಷೆ ಸಮಯದಲ್ಲೇ ಮುಖ್ಯ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾವಣೆಗೊಳಿಸಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ. ಪೋಷಕರು ತಮ್ಮ ಮಕ್ಕಳ ಟಿ.ಸಿ. ಪಡೆದು ಬೇರೆ ಶಾಲೆಗೆ ಸೇರ್ಪಡೆಗೊಳಿಸಲು ಮುಂದಾಗಿದ್ದಾರೆ. ಕೂಡಲೇ ನಿಯೋಜನೆ ಆದೇಶವನ್ನು ರದ್ದುಗೊಳಿಸಬೇಕು. ಆದೇಶ ರದ್ದುಗೊಳಿಸುವವರೆಗೆ ಸ್ಥಳದಿಂದ ಕದಡುವುದಿಲ್ಲ ಎಂದು ಪಟ್ಟು ಹಿಡಿದರು.
ಕಾರ್ಯಕ್ರಮವೊಂದರ ನೀಮಿತ ಕಚೇರಿಯಲ್ಲಿಲ್ಲದ್ದ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಲ್ಲಿನ ಸಿಬ್ಬಂದಿಯೋರ್ವರು ದೂರವಾಣಿ ಮೂಲಕ ಸಂಪರ್ಕಿಸಿ ಪ್ರತಿಭಟನೆಯ ವಿಷಯ ತಿಳಿಸಿದರು. ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮುಖ್ಯ ಶಿಕ್ಷಕಿ ವಿಜಯ ಭಂಡಾರಿಯವರನ್ನು ಬೇರೆ ಶಾಲೆಗೆ ನಿಯೋಜನೆಗೊಳಿಸಿರುವ ಆದೇಶವನ್ನು ರದ್ದು ಪಡಿಸಲಾವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನಕಾರರು ಪ್ರತಿಭಟನೆಯನ್ನು ಹಿಂಪಡೆದರು. ಎರಡು ದಿನದಲ್ಲಿ ನಿಯೋಜನೆ ಆದೇಶವನ್ನು ರದ್ದುಗೊಳಿಸದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ತುಂಗಪ್ಪ ಬಂಗೇರ, ಪ್ರಮುಖರಾದ ದೇವದಾಸ ಶೆಟ್ಟಿ, ರಾಂದಾಸ್ ಬಂಟ್ವಾಳ, ರತ್ನಕುಮಾರ್ ಚೌಟ, ಸತೀಶ್ ಪೂಜಾರಿ, ರಮಾನಾಥ ರಾಯಿ, ಆನಂದ ಶಂಭೂರು ಮೊದಲಾದವರು ಸಹಿತ ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

