ಮೂಡುಬಿದಿರೆ:ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಾಬ್ದಿಯ ಪ್ರಯುಕ್ತ ಪ್ರದಾನಿ ನರೇಂದ್ರ ಮೋದಿಯವರು ಕೇರಳದಲ್ಲಿ ಭಾನುವಾರ ಮಾಡಿದ ಭಾಷಣದ ನೇರ ಪ್ರಸಾರವನ್ನು ಬಿಜೆಪಿ ಮೂಡುಬಿದಿರೆ ಮಂಡಲ ವತಿಯಿಂದ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಭಿತ್ತರಿಸಲಾಯಿತು. ದೀನ್ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ದ.ಕ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ, ದೀನ್ ದಯಾಳ್ ಅವರ ಜೀವನ, ಸಾಧನೆಯ ಕುರಿತು ಮಾತನಾಡಿ, ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಾಬ್ದಿಯ ಈ ವರ್ಷವನ್ನು ಸೇವಾ ವರ್ಷನ್ನಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದೆ. ರಾಷ್ಟ್ರಕ್ಕೆ ಅನನ್ಯ ಸೇವೆ ಸಲ್ಲಿಸಿ, ಲಕ್ಷಾಂತರ ಯುವ ನಾಯಕರಿಗೆ ಸ್ಪೂರ್ತಿಯಾಗಿರುವ ದೀನ್ ದಯಾಳ್ ಅವರಿಗೆ ಗೌರವ ಸಲ್ಲಿಸುವ ದೃಷ್ಠಿಯಿಂದ ಸಮಾಜಮುಖಿ ಕೆಲಸಗಳನ್ನು ಪಕ್ಷ ಹಮ್ಮಿಕೊಂಡಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಜಿಲ್ಲಾ ವಕ್ತಾರ ಕೃಷ್ಣರಾಜ ಹೆಗ್ಡೆ, ಮೂಡುಬಿದಿರೆ ಮಂಡಲ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮಂಡಲ ಕೋಶಾಧಿಕಾರಿ ಪ್ರಸಾದ್ ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಂದನಾ ಪ್ರಭು, ಹಿಂದುಳಿದ ಮೋರ್ಚಾದ ಅಧ್ಯಕ್ಷ ಗೋಪಾಲ ಶೆಟ್ಟಿಗಾರ, ಪರಿಶಿಷ್ಟ ಪಂಗಡ ಮೋರ್ಚಾದ ಅಧ್ಯಕ್ಷ ಕಿಶೋರ್, ಪುತ್ತಿಗೆ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಅಜಯ್ ರೈ, ನಗರ ಶಕ್ತಿ ಕೇಂದ್ರ ಕಾರ್ಯದರ್ಶಿ ಹರೀಶ್ ಎಂ.ಕೆ, ಮುಖಂಡರಾದ ಶಾಂತಿ ಪ್ರಸಾದ್ ಹೆಗ್ಡೆ, ಅಮರ್ ಕೋಟೆ ಮೊದಲಾದವರಿದ್ದರು.

