ಸುದ್ದಿ9 ಕೈಕಂಬ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ತನ್ನ ಗೆಲ್ಲಿಸಲು ಕಾರಣರಾದ ಕಾರ್ಯಕರ್ತರಿಗೆ ಬಂಟ್ವಾಳದ ವಿವಿಧ ಸ್ಥಳದಲ್ಲಿನ ಪೈಕಿ ಕರಿಯಂಗಳ, ಅಮ್ಮುಂಜೆ ಮತ್ತು ಬಡಗಬೆಳ್ಳೂರು ಗ್ರಾಮದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಕಾಂಗ್ರೆಸ್ ಮುಕ್ತ ಬಂಟ್ವಾಳಕ್ಕೆ ಶ್ರಮವಹಿಸೋಣ:
ಬಡಗಬೆಳ್ಳೂರು-ಕಾವೇಶ್ವರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ನಳಿನ್ ಕುಮಾರ್ ಕಟೀಲ್ ದೇಶದ ನೂತನ ಪ್ರಧಾನ ನರೇಂದ್ರ ಮೋದಿಯವರದ್ದು ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಕನಸಾಗಿತ್ತು. ಅದು ಬಹುಪಾಲುಈಡೇರಿದೆ. ನರೇಂದ್ರ ಮೋದಿ ಅವರ ಆಶಯದಂತೆ ಕಾರ್ಯಕರ್ತರು ಶ್ರಮದಿಂದ ದೇಶವನ್ನು ಕಾಂಗ್ರೆಸ್ನಿಂದ ಮುಕ್ತವಾಗಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಂಟ್ವಾಳವನ್ನು ಕಾಂಗ್ರೆಸ್ ಮುಕ್ತ ತಾಲೂಕನ್ನಾಗಿಸಬೇಕು. ಈ ಬಗ್ಗೆ ಈಗಿಂದೀಗಲೇ ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳಬೇಕು. ನಾನೂ ಕೂಡಾ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ ನಾನು ಪ್ರಯತ್ನ ಪಡ್ತೇನೆ. ಕಾರ್ಯಕರ್ತರು ಹಿಂದಿನ ಉತ್ಸಾಹದಲ್ಲಿ ಮುಂದುವರಿದರೆ ಕಾಂಗ್ರೆಸ್ ಪಕ್ಷವನ್ನು ಹೇಳಹೆಸರಿಲ್ಲದಂತೆ ಮಾಡಿಕೊಂಡು ಮುಂದಿನ ಸ್ಥಳೀಯ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.
ಅಮ್ಮುಂಜೆ ರಸ್ತೆ ನಬಾರ್ಡ್ ರಸ್ತೆಯಾಗಲಿದೆ:
ಬಡಗಬೆಳ್ಳೂರು ಗ್ರಾಮಸ್ಥರು ಇಲ್ಲಿನ ಹಲವು ರಸ್ತೆ ಹಾಗೂ ಇತರ ಕಾಮಗಾರಿಗಳಿಗೆ ಮೂರು ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದಾರೆ. ಕರಿಯಂಗಳ ,ಅಮ್ಮುಂಜೆ ಗ್ರಾಮದ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ನಳಿನ್ ಬಡಕಬೈಲಿನಿಂದ ಅಮ್ಮುಂಜೆ ಕಲಾಯಿಯವರೆಗಿನ ಹದಗೆಟ್ಟ ರಸ್ತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಅದನ್ನು ನಬಾರ್ಡ್ ಯೋಜನೆಯೊಂದಿಗೆ ಸೇರಿಸಲಾಗುವುದು. ಅಲ್ಲದೆ ರಸ್ತೆ ಬದಿಯಲ್ಲಿ ವಾಸವಾಗಿರುವವರು ತನ್ನ ಖಾಸಗಿ ಜಾಗವನ್ನು ಮುಕ್ತ ಮನಸ್ಸಿನಿಂದ ರಸ್ತೆಗೆ ಬಿಟ್ಟುಕೊಡಬೇಕಾದ ಅವಶ್ಯಕತೆ ಇದೆ. ಇಲ್ಲಿರುವ ಹಲವಾರು ರಸ್ತೆಗಳನ್ನು ಹಂತಹಂತವಾಗಿ ಮೇಲದ್ಜರ್ಜೆಗೆ ರಿಸಲಾಗುವುದು ಎಂದರು.
ಬಡಗಬೆಳ್ಳೂರಿನ ಬಿಜೆಪಿ ಕಾರ್ಯಕರ್ತರ ಪರವಾಗಿ ದಯಾನಂದ ಅವರು ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಅಲ್ಲದೆ ತನ್ನ ಗ್ರಾಮದ ಹಲವಾರು ಸಮಸ್ಯೆಗಳನ್ನು ಬರೆದು ಮನವಿಯ ಮೂಲಕ ಸಲ್ಲಿಸಿದರು.
ಪೊಳಲಿ ರಾಜರಾಜೇಶ್ವರಿ ದೇವಳದಲ್ಲಿ ಪ್ರಸಾದ ಸ್ವೀಕರಿಸಿ ದೇವಸ್ಥಾನದ ಸರ್ವಮಂಗಳ ಮಂಟಪದಲ್ಲಿ ಕಾರ್ಯಕರ್ತರನ್ನುದ್ದೇಶಿ ಮಾತಾಡಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ಅಮ್ಮಂಜೆಗೆ ತೆರಳಿ ವಿನಾಯಕ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ಅಲ್ಲಿನ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲಿಂದ ಕಾವೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಅಲ್ಲಿಂದ ಕೂರಿಯಾಲ, ರಾಯಿ , ಸಿದ್ದಕಟ್ಟೆ ಮುಂತಾದ ಕಡೆಗಳಲ್ಲಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ತೆರಳಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪದ್ಮಾನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ರಾಜೇಶ್ ನಾಕ್ ಉಳಿಪಾಡಿ ಗುತ್ತು, ಸುಲೋಚನಾ ಭಟ್, ದೇವ್ ದಾಸ್ ಶೆಟ್ಟಿ, ಸದಾನಂದ ಮಲ್ಲಿ, ಬಂಟ್ವಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ, ಬಿಜೆಪಿಯ ಮಹಿಳಾ ಮೋರ್ಛಾದ ಸುಲೋಚನ ಭಟ್, ಬಂಟ್ವಾಳ ತಾ.ಪಂ. ಅಧ್ಯಕ್ಷ ದೇರಾಜೆ ಯಶವಂತ ಪೂಜಾರಿ, ಉಪಾಧ್ಯಕ್ಷೆ ವಿಲಾಸಿನಿ ಪೂಜಾರಿ, ಜಿ.ಪಂ. ಸದಸ್ಯೆ ಜಯಶ್ರೀ ಕೆ.ಎ. ತಾ.ಪಂ ಸದಸ್ಯೆಯರಾದ ಶೈಲಜಾ ಪಿ. ಶೆಟ್ಟಿ, ಗುಣವತಿ, ಸ್ಥಳೀಯ ಮುಖಂಡ ವೆಂಕಟೇಶ ನಾವುಡ, ಬಾಲಕೃಷ್ಣ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಬಾರಿಂಜೆ ಜನಾರ್ದನ, ವಾಮನಾಚಾರ್ಯ, ರವೀಂದ್ರ ಸುವರ್ಣ, ಚಂದ್ರಶೇಖರ ಶೆಟ್ಟಿ, ಸುಖೇಶ್ ಚೌಟ, ಪ್ರಕಾಶ್ ಆಳ್ವ, ಶಶಿಕಿರಣ್ ಪೂಜಾರಿ, ಗೋಪಾಲ ಬಂಗೇರಾ, ಯಶೋದರ,ಆನಂದ ಬೆಲ್ಚಾಡ ಬಿಜೆಪಿ ಯುವಮೋರ್ಛಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಯು.ಬಿ ಮತ್ತಿತರರು ಉಪಸ್ಥಿತರಿದ್ದರು. ರಮೇಶ್ ಬಟ್ಟಾಜೆ ಕಾರ್ಯಕ್ರಮ ನಿರೂಪಿಸಿದರು.











