ಸೆ.8ರಂದು  ಇದು ಕನ್ಯಾ ಮರಿಯಮ್ಮನವರ ಜನ್ಮದಿನ   ದೇಶವಿದೇಶಗಳೆಲ್ಲೆಡೆ ನೆಲೆಯಾಗಿರುವ ಕರ್ನಾಟಕ ಕರಾವಳಿ ಪ್ರ್ರಾದೇಶಿಕ (ವಿಶೇಷವಾಗಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು ಮುಂತಾದ ಪ್ರಾಂತ್ಯಗಳ) ಕೈಸ್ತರು ತಾಯ್ನಾಡಿನ ಸಂಸ್ಕೃತಿಯನ್ನು ಮೆರೆದು ಸೆ.8ರಂದು `ಪ್ರಕೃತಿ ಮಾತೆ’ಯ (ಯೇಸು ಕ್ರಿಸ್ತರ ಜನನಿದಾತೆ ಮಾತೆ ಮರಿಯಮ್ಮ) ಹುಟ್ಟುಹಬ್ಬ ಸಂಭ್ರಮಿಸುವುದು ಅನಾದಿ ಕಾಲದ ಸಂಪ್ರದಾಯವೂ ಹೌದು. ಕೃಷಿ ಪ್ರಧಾನ ಈ ಆಚರಣೆಯನ್ನು ತುಳು ಭಾಷಿಗರು ಕುರಲ್ ಪರ್ಬ ಎಂದರೆ ಕನ್ನಡಿಗರು ತೆನೆಹಬ್ಬ ಎಂದಾಗಿಸಿ ಆಚರಿಸುತ್ತಾರೆ. ವಿಶ್ವದ ಎಲ್ಲಾ ಕ್ರೈಸ್ತ ಬಾಂಧವರು ನವೋಲ್ಲಾಸ ಹೊಂದುವ ಪವಿತ್ರ ಹಬ್ಬ ಎಂದಾದರೆ ಪ್ರಪಂಚದ ಎಲ್ಲ ಕ್ರೈಸ್ತರಿಕ್ಕಿಂತ ಭಾರತದಲ್ಲಿ ಈ ದೇಶದ ಸನಾತನ ಪಾರಂಪರಿಕ ಶ್ರದ್ಧೆಗೆ ಅನುಗುಣವಾಗಿ ಆಚರಿಸಲ್ಪಡುತ್ತಿದೆ. ಕರುನಾಡುನಲ್ಲಿ ಹೊಸತು ಉಣ್ಣುವ ಹಬ್ಬವಾಗಿಯೂ, ತುಳುನಾಡಿನಲ್ಲಿ ಮೊಂತಿಪರ್ಬ. ದೇವಮಾತೆಯನ್ನು ಪ್ರಕೃತಿಮಾತೆಯನ್ನಾಗಿಸಿ ಕನ್ಯಾ ಮರಿಯಮ್ಮನ ಸ್ಮರಣೆ, ಆರಾಧನೆ, ಅಭಿವಂದನೆ ಸಲ್ಲಿಸುವ ಸುದಿನವೇ ಕ್ರೈಸ್ತರ ಪಾಲಿನ ಮೊಂತಿ ಹಬ್ಬ. ಕರ್ನಾಟಕ ಕರಾವಳಿಯ ಕಥೊಲಿಕ್ ಕ್ರೈಸ್ತರಲ್ಲಿ ಈ ತೆನೆಹಬ್ಬ ಮೊಂತಿಫೆಸ್ತ್ ಹೆಸರಿನಿಂದಲೇ ಹೆಚ್ಚು ಪರಿಚಿತ. ಮಾತೆ ಮರಿಯಮ್ಮ ಈ ಹಬ್ಬದ ಪೂಜ್ಯ ದೇವತೆ.

DSC_0028

DSC_0029

DSC_0031

DSC_0032

DSC_0035

DSC_0036

DSC_0037

DSC_0038

DSC_0039

DSC_0041

DSC_0044

DSC_0045

DSC_0046

DSC_0026

DSC_0027
ಸ್ಥಳಿಯ ಇಗರ್ಜಿಗಳಲ್ಲಿ `ಕನ್ಯಾಕುಮಾರಿ ಮಾತೆಯ’ ಪ್ರತಿಮೆಯನ್ನು ಅಲಂಕರಿಸಿ ಸುಮಾರು ಎಂಟು ದಿನಗಳ ನಿರಂತರ ನೊವೆನಾ (ಆರಾಧನೆ) ಮತ್ತು ಪುಟಾಣಿಗಳಿಂದ ಪುಷ್ಫಾರ್ಚನೆಗೈದು ಸಂಭ್ರಮಿಕ ಪೂಜೆ ನೆರವೇರಿಸಿ ಮೊಂತಿಫೆಸ್ತ್‍ಗೆ ಸಿದ್ಧತೆ ನಡೆಸಲ್ಪಡುತ್ತದೆ. ಹಬ್ಬದ ದಿನ ಅಲಂಕೃತ ಮಾತೆಯ ಪುಸ್ಥಳಿ ಮೆರವಣಿಗೆ ಸಂಭ್ರಮದೊಂದಿಗೆ ಇಗರ್ಜಿಗೆ ತರುತ್ತಾ ಜೊತೆಗೆ ರೈತರು ಬೆಳೆಸಿದ ಬತ್ತದ ಮೊದಲ `ತೆನೆ’ಯನ್ನು ಕೃಷಿಕರು ಬೆಳೆಸಿದ ಎಲ್ಲಾ ತರದ ಕಾಯಿಪಲ್ಲೆ, ತರಕಾರಿ, ದವಸಧಾನ್ಯ, ಹಣ್ಣುಹಂಪಲು ಮಾತೆಗೆ ಸಮರ್ಪಿಸುವ ರೂಢಿ. ಆಶೀರ್ವಾದಿಸಿ ಕೊಳ್ಳುವುದು ಹಬ್ಬದ ಸಂಪ್ರದಾಯ. ಬರೇ ಕ್ರೈಸ್ತರಲ್ಲ್ಲದೆ ಅನ್ಯಧರ್ಮಿಯರೂ ಹೊಲದಿಂದ ಕೊಯ್ದು ತಂದ ಹೊಸ ಭತ್ತದ ತೆನೆಗಳನ್ನು ಧಾರ್ಮಿಕ ವಿಧಿಗಳೊಂದಿಗೆ ಧರ್ಮಗುರುಗಳು (ಪಾದ್ರಿ) ಮಾತೆಗೆ ಕೃತಜ್ಞತಾ ಪೂಜೆ ನೆರವೇರಿಸಿ, ವಿಶೇಷವಾಗಿ ತೆನೆಯನ್ನು ಆಶೀರ್ವಚಿಸುವರು. ಪೂಜೆಯ ಬಳಿಕ ಪಾದ್ರಿಗಳು ತೆನೆ ಹಾಗೂ ಮೇಣದ ಬತ್ತಿಯನ್ನು ಪ್ರಾಯೋಜಕ ಗಣ್ಯರಿಗೆ ನೀಡಿಯೂ ಕಬ್ಬುವನ್ನು ಮಕ್ಕಳಿಗೆ ವಿತರಿಸುವ ಶುಭಕೋರುವ ವಾಡಿಕೆ ಇಂದಿಗೂ ಇದೆ.

ನೆರೆದ ಭಕ್ತರು ಆಶೀರ್ವಚಿಸಿದ ಕದಿರು (ತೆನೆ) ಪಡೆದು ಪಾವಿತ್ರ್ಯತೆಯೊಂದಿಗೆ ಮನೆಗೆ ತರುವಂತಹದ್ದು. ಭಕ್ತಿಯಿಂದ ಮನೆಗೆ ತಂದ ಭತ್ತದ ತೆನೆಯನ್ನು ಪ್ರಾರ್ಥನೆ, ಭಕ್ತಿಗೀತೆಗಳೊಂದಿಗೆ ಮಾತೆಯನ್ನು ಸ್ತುತಿಸಿ ಉಪಸ್ಥಿತ ಕುಟುಂಬಸ್ಥರನ್ನು ಒಳಗೊಂಡು ಯಜಮಾನನು ಮನೆಯೊಳಗೆ ಸೇರುವಂತಹದ್ದು. ನಂತರ ಕದಿರನ್ನು ಯಾವುದೇ ಆಯುಧಗಳ ಸಹಾಯವಿಲ್ಲದೆ ಬರೇ ಕೈಬೆರಳುಗಳಿಂದ ಬೇರ್ಪಡಿಸಿ ಹಾಲು ಅಥವಾ ಪಾಯಸದÀಲ್ಲಿ ಬೆರೆಸಿ ಮನೆ ಒಡತಿಗೆ ಮತ್ತು ಮಕ್ಕಳಿಗೆ ನೀಡುತ್ತಾ ಅದನ್ನು ಸೇವಿಸುವ ಸಂಸ್ಕೃತಿ ತೆನೆಹಬ್ಬದ ರೂಢಿ. ಬಳಿಕ ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ಕೂತು ಜೀವನದ ಈ ವರೇಗಿನ ಎಲ್ಲಾ ವಿಘ್ನ ನಿವಾರಿಸಿ ಪ್ರಕೃತಿಮಾತೆ, ಭಗವಂತನು ಫಲಿಸಿದ ಪ್ರಥಮ ಫಲಕ್ಕೆ ವಂದಿಸಿ ವರ್ಷಪೂರ್ತಿ ನೆಮ್ಮದಿ ಸಮೃದ್ಧಿ ನೀಡೆಂದು ಮಕ್ಕಳು, ಹಿರಿಯರೆಲ್ಲಾ ಪ್ರಾರ್ಥಿಸುತ್ತಾ ಹೊಸಅಕ್ಕಿ ಊಟವನ್ನು ಸಸ್ಯಹಾರ ಭೋಜನವಾಗಿ ಸಂಪ್ರದಾಯಿಕವಾಗಿ ಹಬ್ಬ ಆಚರಿಸುವ ವಾಡಿಕೆ ಇಂದಿಗೂ ಮುಂದುವರಿದಿದೆ. ಹೊಸದಾಗಿ ಮದುವೆಯಾದ ಮನೆಯ ಗಂಡು, ಹೆಣ್ಣು (ಸೊಸೆ/ ಅಳಿಯ) ವಿಶೇಷವಾಗಿ ಹಬ್ಬಕ್ಕೆ ಆಹ್ವಾನಿಸಲ್ಪಟ್ಟು ಜೊತೆಗೂಡಿ ಅಹಾರ ಸೇವಿಸುವುದು ಈ ಹಬ್ಬದ ವಿಶೇಷತೆ. ಉದ್ಯೋಗಕ್ಕಾಗಿ ಬೇರೆ ಊರು, ದೇಶ-ವಿದೇಶಗಳಿಗೆ ತೆರಳಿದ ಕುಟುಂಬ ಸದಸ್ಯರೆಲ್ಲರೂ ಹಬ್ಬದ ಶುಭಾವಸರದಿ ಹಾಜರಿರಬೇಕು. ಅನಿವಾರ್ಯವಾಗಿ ಪಾಲ್ಗೊಳ್ಳಲು ಸಾಧ್ಯವಾದಲ್ಲಿ ಅವರ ಪಾಲನ್ನು (ಕದಿರು) ಭೋಜನದ ಮುನ್ನ ತೆಗೆದಿಡುವುದಿದೆ. ಅದನ್ನು ಅಂಚೆ ಮೂಲಕ ಭತ್ತದ ತೆನೆ ಕಳುಹಿಸಿ ಅವರೂ ಪ್ರಥಮ ಭೋಜನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ನದಿ, ಕಡಲ ತೀರದ ಜನತೆ ತಮ್ಮಲ್ಲಿ ವಿೂನು ಊಟಕ್ಕೆ ಮಹತ್ವ ನೀಡಿದರೆ ಇತರೆಲ್ಲೆಡೆ ಸಸ್ಯಹಾರವೇ ಪ್ರಧಾನವಾಗಿರುತ್ತದೆ. ಇಲ್ಲೂ ವಿಷಮ ಸಂಖ್ಯಾ ಪದಾರ್ಥ ತಯಾರಿ ಲೆಕ್ಕಾಚಾರ ವಿಶೇಷತೆ. ಕುಟುಂಬಸ್ಥರೆಲ್ಲರೂ ಒಗ್ಗೂಡಿ ಪರಂಪರಿಕವಾದ ಪರಿಮಾಳ ಭರಿತ ಪಾಯಾಸ, ಕೊಟ್ಟಿಗೆ ಇತ್ಯಾದಿ ತಿಂಡಿ ತಿನಸುಗಳು ಭರ್ಜರಿ ಬೀಗರೂಟವನ್ನು ಸವಿದು ಹಬ್ಬವನ್ನು ಆಚರಿಸುತ್ತಾರೆ.

1566ರ ಸುಮಾರಿಗೆ ಮುಂಬಯಿಯಲ್ಲಿ ಆರಂಭಗೊಡಿದೆ ಎನ್ನಲಾದ ಈ ಮೊಂತಿಹಬ್ಬದ ಆಚರಣೆ ಮುಂದೆ ಗೋವಾ ಹಾಗೂ ಕರಾವಳಿ ಕರ್ನಾಟಕ ಭಾಗದ ಕಥೋಲಿಕ್ ಕ್ರೈಸ್ತರಲ್ಲಿ ಹೆಚ್ಚು ಪ್ರಚಲಿತವಾಯಿತು ಎನ್ನುವ ಉಲ್ಲೇಖವಿದೆ. ಲ್ಯಾಟಿನ್ ಭಾಷೆಯಲ್ಲಿ ಮೊನ್ಸ್ ಅಂದರೆ ಬೆಟ್ಟ ಎಂಬ ಅರ್ಥವಿದೆ. ಪೆÇೀರ್ಚುಗೀಸ್ ಭಾಷೆಯಲ್ಲೂ ಮೊಂತೆ ಅಂದರೆ ಬೆಟ್ಟವೆಂಬ ಅರ್ಥ. ಬಾಂದ್ರಾದ ಬೆಟ್ಟದ ಮೇಲೆ ಪ್ರತಿಷ್ಠಾಪಿಸಿದ ಮಾತೆ ಮೇರಿಯ ಗುಡಿಯಲ್ಲಿ ಆರಂಭಗೊಂಡ ಈ ಹಬ್ಬ ಬೆಟ್ಟದ ಮಾತೆಯ ಹಬ್ಬ ಎಂಬುದಾಗಿ ನಡೆದು ಬಂದಿರುವ ಊಹೆಯಿದೆ. ಆದರೆ ಕರಾವಳಿ ಭಾಗದ ಕ್ರೈಸ್ತರು ಹಿಂದೆ ಕೃಷಿಯನ್ನೇ ಪ್ರಧಾನ ವ್ಯಾಪ್ತಿ, ಕಸಬು ಮಾಡಿಕೊಂಡಿರುವುದು ತೆನೆಹಬ್ಬವಾಗಿ ಆಚರಿಸಿಕೊಳ್ಳಲು ಕಾರಣ ವಾಗಿರಬಹುದು.

ಈ ಹಬ್ಬ ಕೇವಲ ಒಂದು ದಿನದ ಆಚರಣೆಯಲ್ಲ. ಹಬ್ಬಕ್ಕಿಂತಲೂ ಮೊದಲು 9 ದಿನಗಳ ಪೂರ್ವಸಿದ್ಧತೆ ನಡೆಸಿ ಮಾತೆಮೇರಿಯ ಕೃಪೆ ಬೇಡಿಕೊಂಡು ವಿಶೇಷ ಪ್ರಾರ್ಥನೆ(ನವೇನಾ) ಎಲ್ಲಾ ರೋಮನ್ ಕಥೋಲಿಕ್ ಕ್ರೈಸ್ತ ದೇವಾಲಯ (ಚರ್ಚ್) ಗಳಲ್ಲಿ ನಡೆಯುತ್ತದೆ. ಪುಟ್ಟ ಪುಟ್ಟ ಮಕ್ಕಳು ಚೆಂದದ ಹೂಗಳನ್ನು ಚಿಕ್ಕ ಬುಟ್ಟಿಗಳಲ್ಲಿ ದೇವಾಲಯಕ್ಕೆ ಹೊತ್ತು ತಂದು ಮಾತೆ ಮೇರಿಗೆ ಭಕ್ತಿಪೂರ್ವಕವಾಗಿ ಅರ್ಪಿಸುವುದನ್ನು ನೋಡುವುದೇ ಚೆಂದ. ಒಂಬತ್ತನೆಯ ದಿನ ಹಬ್ಬದ ಸಂಭ್ರಮ. ಕಥೋಲಿಕ್ ಕ್ರೈಸ್ತ ದೇವಾಲಯಗಳಲ್ಲಿ ಪೂಜೆ ಪುರಸ್ಕಾರಗಳು ನಡೆದ ಬಳಿಕ ಎಲ್ಲೆಲ್ಲೂ ಸಂಭ್ರಮ.

ಯಾಂತ್ರಿಕ ಜೀವನದ ಮಧ್ಯೆ ಶಹರದ ಜನತೆಗೆ ಇಂತಹ ಆಚರಣೆ ಅನಿವಾರ್ಯವಾದರೂ, ಕ್ರೈಸ್ತರ ಸಂಘ ಸಂಸ್ಥೆಗಳು ತಮ್ಮ ಸದಸ್ಯರು, ಆಸುಪಾಸಿನ ಜನತೆಯನ್ನು ಒಗ್ಗೂಡಿಸಿ ಪವಿತ್ರ ಕುರಲ್ ಪರ್ಬ (ತೆನೆ ಹಬ್ಬ)ವನ್ನು ಆಚರಿಸುತ್ತಾರೆ. ಸ್ಥಳಿಯ ಇಗರ್ಜಿಗಳಲ್ಲಿ `ಕನ್ಯಾಕುಮಾರಿ ಮಾತೆಯ’ ಪ್ರತಿಮೆಯನ್ನು ಅಲಂಕರಿಸಿ ಪುಟಾಣಿಗಳಿಂದ ಪುಷ್ಫಾರ್ಚನೆಗೈದು, ನೊವೆನಾ, ಆರಾಧನೆ, ಸಂಭ್ರಮಿಕ ಪೂಜೆಯನ್ನು ನೆರವೇರಿಸುತ್ತಾರೆ. ಬಳಿಕ ತಾಯ್ನಾಡಿನಿಂದ ತರಿಸಿಕೊಂಡ `ತೆನೆ’ಯನ್ನು ಆಶೀರ್ವಾದಿಸಿ ಕಬ್ಬು ಹಂಚಿ ಕೊಂಡು ಹೊಸ ಅಕ್ಕಿ ಊಟ, ಸಸ್ಯಹಾರ ಭೋಜನದೊಂದಿಗೆ ಸಂಪ್ರದಾಯಿಕ ಹಬ್ಬಕ್ಕೆ ಸಾಥ್ ನೀಡುತ್ತಾರೆ.

ಮುಂಬಯಿಯಲ್ಲಿ ತಮ್ಮ ನಂಬಿಕೆಯ ಮಾತೆಯಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಲು ಬಾಂದ್ರಾ ಪಶ್ಚಿಮದ `ಮೌಂಟ್ ಮೇರಿ’, ಅಂಧೇರಿ ಪಶ್ಚಿಮ ಇಲ್ಲಿನ ಇರ್ಲಾದ ವೆಲಂಕಣಿ (ಆರೋಗ್ಯ ಮಾತೆ) ಮಾತೆಯ ಮಂದಿರ, ಮಾಹಿಮ್‍ನ ಸೈಂಟ್ ಮೈಕಲ್ಸ್ ಚರ್ಚ್‍ನ `ನಿತ್ಯಾಧರ್ ಮಾತೆ’ಯ ದೇವಾಲಯಗಳಿಗೆ ಭೇಟಿಯನ್ನಿತ್ತು ಧನ್ಯರೆಣಿಸುವುದನ್ನು ರೂಢಿಯಲ್ಲಿರಿಸಿದ್ದಾರೆ. ಈ ಮೂರು ದೇವಾಲಯಗಳು ಮಾತೆ ಮರಿಯಮ್ಮ ಇವರ ಪವಾಡ ಕ್ಷೇತ್ರಗಳೆಂಬ ನಂಬಿಕೆಯಿದ್ದು, ಇಲ್ಲಿ ದೇಶ-ವಿದೇಶಗಳಿಂದ ಮಾತೆ ಮರಿಯಮ್ಮರಿಗೆ ಲಕ್ಷಾಂತರ ಭಕ್ತಾಧಿಗಳಿಂದ ಆರ್ಚನೆ ನಡೆಯುತ್ತಿವೆ. ಅಂತೆಯೇ ಈ ಕ್ಷೇತ್ರಗಳಲ್ಲಿ `ಮಾತೆ ಭಕ್ತರ ಸಹಾಯ’ಕ್ಕಾಗಿ ಬರುತ್ತಾರೆ ಎನ್ನುವುದು ಪ್ರತೀತ. ಮಾಹಿಮ್‍ನ ಚರ್ಚ್‍ನಲ್ಲಿ ನಿತ್ಯಾಧರ್ ಮಾತೆ (ಅವರ್ ಲೇಡಿ ಆಫ್ ಪರ್‍ಪೆಕ್ಚುವಲ್ ಸಕೌರ್) ದೀನ ದಲಿತರ ನೆರವಿನ ಮಾತೆ ಎನ್ನುವುದು ವಾಸ್ತವ. ಸುಮಾರು ನಾಲ್ಕುನೂರು ವರ್ಷಗಳ ಇತಿಹಾಸ ಇರುವ `ಉಪನಗರಗಳ ರಾಣಿ’ ಎಂದೇ ಅರಿಯಲ್ಪಡುವ `ಮೌಂಟ್ ಮೇರಿ’ ಇಂದಿಗೂ ತನ್ನ ಮಹಿಮೆಯನ್ನು ಉಳಿಸಿಕೊಂಡ ಕ್ಷೇತ್ರವಾಗಿದೆ. ಎಲ್ಲಾ ಸಮೂದಾಯ-ಧರ್ಮದ ಜನತೆಯನ್ನು ಆಕರ್ಷಿಸಿಸುವ ಕ್ಷೇತ್ರ ಇದಾಗಿದ್ದು, `ಮೊಂತಿ ಹಬ್ಬ’ದ ದಿನದಿಂದ ನಿರಂತರ ಒಂಭತ್ತು ದಿನಗಳ ವರೇಗೆ ‘ಮೌಂಟ್ ಮೇರಿ ಫೇರ್’ ಜಾತ್ರೆಯ ಸಂಭ್ರಮ ಕಳೆದ ನಲ್ವತ್ತು ದಶಕಗಳಿಂದ ನಡೆದು ಬಂದಿದೆ. ಬಾಂದ್ರಾ ಬಾಸಿಲಿಕಾ ಎಂದೇ ಸ್ಥಾನಮಾನವಾನ್ನು ಪಡೆದ ಈ ಕ್ಷೇತ್ರಕ್ಕೆ ದೇಶ-ವಿದೇಶಗಳಿಂದ ನೂರಾರು ಧರ್ಮದ ಅನುಯಾಯಿಗಳನ್ನು ನೆರೆದು ಆರಾಧಿಸುತ್ತಾರೆ. ಸ್ಥಳಿಯ ನಿವಾಸಿ `ಕೋಲಿ’ ಜನಾಂಗದ ಮೀನುಗಾರರು ಇಲ್ಲಿನ ಮೂಲ ಭಕ್ತರು. ಇದರಂತೆಯೇ ಇರ್ಲಾದ ವೆಲಂಕಣಿ ದೇವಾಲಯವೂ ಒಂದಾಗಿದೆ. ವಿಶ್ವಪ್ರಸಿದ್ಧ ದೇವಾಲಯವಾದ ಭಾರತ ರಾಷ್ಟ್ರದಾದ್ಯಂತ ಭಕ್ತ ಜನತೆಯಿಂದ ಆಕರ್ಷಿಸಲ್ಪಡುವ ಚೆನ್ನೈಯಲ್ಲಿನ ವೆಲಂಕಣಿ ಮಾತೆಯಿಂದ ಪ್ರತಿಷ್ಠಾಪಿಸಲ್ಪಟ್ಟ ಮಂದಿರ ಇರ್ಲಾವಾಗಿದೆ. ಇಲ್ಲಿ ಆರೋಗ್ಯ ಮಾತೆಯ (ವೆಲಂಕಣಿ) ಮಂದಿರ ಸುಪ್ರಸಿದ್ಧ ಆರಾಧನಾ ಕೇಂದ್ರಗಳಲ್ಲಿ ಒಂದಾಗಿದೆ. ಇದೂ ಕೂಡಾ ಸರ್ವ ಧರ್ಮೀಂiÀiರು ಜೊತೆಗೂಡಿ ಪ್ರಾರ್ಥಿಸುವ ಪ್ರಾರ್ಥನಾಲಯವಾಗಿದೆ. ಇಲ್ಲಿ ಮುಂಜಾನೆ ಐದು ಗಂಟೆಯಿಂದ ರಾತ್ರಿ ಹತ್ತರ ವರೇಗೆ ನಿರಂತರ ನೊವೆನಗಳು ನಡೆಯುತ್ತಿದ್ದು, ಭಕ್ತರ ವಿಶ್ವಾಸದ ತಾಣವಾಗಿ ಪರಿಣಮಿಸಿದೆ. ಈ ಎಲ್ಲಾ ಮೂರು ಕ್ಷೇತ್ರಗಳೂ ಸರ್ವ ಧರ್ಮ ಸಮಭಾವದ ಪ್ರತೀಕಗಳೆಂದು ಕರೆಯಲ್ಪಡುತ್ತಿವೆ. ಇಲ್ಲಿ ಮಾತೆಯ ದರ್ಶನಕ್ಕೆ ಸರತಿ ಸಾಲಿನಲ್ಲಿ ಸಾಗುತ್ತಿರುವ ಭಕ್ತಾಧಿಗಳ ಸಂಖ್ಯೆ ಲಕ್ಷಕ್ಕೂ ಮಿಕ್ಕುತ್ತಿದೆ.

ರೋನ್ಸ್ ಬಂಟ್ವಾಳ್.

By suddi9

Leave a Reply

Your email address will not be published. Required fields are marked *