ಬಂಟ್ವಾಳ: ಸಂಸ್ಕಾರಯುತ ಶಿಕ್ಷಣ ಸಿಗಬೇಕಾದರೆ ಕನ್ನಡ ಮಾಧ್ಯಮಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಇದರ ಜೊತೆಗೆ ವ್ಯಾವಹಾರಿಕ ದೃಷ್ಟಿಕೋನದಿಂದ ಆಂಗ್ಲ ಭಾಷೆಯ ಕಲಿಕೆಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಪ್ರಕಾಶ್ ಅಂಚನ್ ಹೇಳಿದರು.
ಅವರು ಸುರಿಬೈಲು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಇಂಗ್ಲೀಷ್ ಭಾಷಾ ಹಿತರಕ್ಷಣ ಸಮಿತಿ ವತಿಯಿಂದ ಶುಕ್ರವಾರ ಸಂಜೆ ನಡೆದ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳಲ್ಲಿಯೇ ಕನ್ನಡದ ಜೊತೆಗೆ ಆಂಗ್ಲ ಭಾಷೆ ಕಲಿಕೆ ಅವಕಾಶ ಮಾಡುವ ಮೂಲಕ ಸರಕಾರಿ ಶಾಲೆಯನ್ನು ಉಳಿಸುವ ದೃಢ ಸಂಕಲ್ಪವನ್ನು ಎಲ್ಲಾ ಪೋಷಕರು ಕೈಗೊಳ್ಳಬೇಕಾಗಿದೆ ಎಂದರು.

ಇಂಗ್ಲೀಷ್ ಭಾಷಾ ಹಿತರಕ್ಷಣ ಸಮಿತಿಯ ಕಾರ್ಯಧ್ಯಕ್ಷ ಬಷೀರ್ ಅಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಸ್.ಎಂ.ಅಬೂಬಕ್ಕರ್, ಕಾರ್ಯದರ್ಶಿ ಅಝೀಝ್ ದೊಡ್ಡಮನೆ, ಶಾಲಾಭಿವೃದ್ದಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಖಾದರ್, ಉದ್ಯಮಿ ರಫೀಕ್ ಹಾಜಿ, ಮುಖ್ಯೋಪಾಧ್ಯಾಯಿನಿ ಶಶಿಕಲಾ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಹಾಜರಿದ್ದರು. ಸಹಶಿಕ್ಷಕ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
