ಮೂಡುಬಿದಿರೆ: ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಭಾಗವತಿಕೆ ಮತ್ತು ಚೆಂಡೆಮದ್ದಳೆ ಅಭ್ಯಾಸ ತರಗತಿಯನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿಲಾಯಿತು. ರಂಗಕರ್ಮಿ ಜೀವನ್ರಾಮ್ ಸುಳ್ಯ ಅಭ್ಯಾಸ ತರಗತಿಯನ್ನು ಉದ್ಘಾಟಿಸಿ, ಭಾಗವತಿಕೆಯೆಂಬುದು ಸಾಮಾನ್ಯ ವಿದ್ಯೆಯಲ್ಲ. ಅದನ್ನು ಕಲಿಯಲು ಸಾಕಷ್ಟು ಶ್ರದ್ಧೆ ಹಾಗೂ ಪರಿಶ್ರಮ ಅಗತ್ಯವಾಗಿ ಬೇಕು. ಫ್ಯಾಶನ್ಗಾಗಿ ಅಥವಾ ಕೇವಲ ತೋರ್ಪಡಿಕೆಗಾಗಿ ಭಾಗವತಿಕೆಯನ್ನು ಕಲಿಯತ್ತೇವೆಂದರೆ ಅದು ಖಂಡಿತ ಸಾಧ್ಯವಿಲ್ಲ. ವಿದ್ಯೆಗೆ ನಮ್ಮನ್ನು ಶ್ರದ್ಧಾಪೂರ್ವಕವಾಗಿ ಒಪ್ಪಿಸಿಕೊಳ್ಳುವ ಗುಣವಿದ್ದಾಗ ಮಾತ್ರ ಕಲಾಸರಸ್ವತಿ ಒಲಿಯಲು ಸಾಧ್ಯ ಎಂದರು.

ಭಾಗವತರಾದ ಲೀಲಾವತಿ ಬೈಪಡಿತ್ತಾಯ ಹಾಗೂ ಹರಿನಾರಾಯಣ ಬೈಪಡಿತ್ತಾಯ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
