ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸಹಯೋಗದೊಂದಿಗೆ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಹಾಗೂ ತುಳು ನಾಟಕೋತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ 8 ದಿನಗಳ ತುಳು ನಾಟಕೋತ್ಸವ ಆ.7ರಿಂದ ಆ.14ರವರೆಗೆ ಬಂಟ್ವಾಳ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಸ್ವಾಮಿ ಕಲಾಮಂಟಪದಲ್ಲಿ ಪ್ರತಿ ದಿನ ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಸುದರ್ಶನ ಜೈನ್ ತಿಳಿಸಿದರು. ಬಿ.ಸಿ.ರೋಡಿನ ಭೂ ಅಭಿವೃದ್ದಿ ಬ್ಯಾಂಕಿನ ಮೀಟಿಂಗ್ ಹಾಲ್ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಆ. 7ರಂದು ಸಂಜೆ 5 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನಾಟಕೋತ್ಸವವನ್ನು ಉದ್ಘಾಟಿಸಲಿರುವರು, ಮಿಜಾರು ಭೂತನಾತೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ವಿಜಯನಾಥ ವಿಠಲಶೆಟ್ಟಿ ನಿತ್ಯಾನಂದ ಸ್ವಾಮಿ ಕಲಾಮಮಂಟಪ ಉದ್ಘಾಟಿಸುವರು, ಸಮಿತಿಯ ಗೌರವಾಧ್ಯಕ್ಷ ಸುದರ್ಶನ ಜೈನ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. 
ಲಕುಮಿ ತಂಡದ ಕಿಶೋರ್ ಡಿ.ಶೆಟ್ಟಿ, ನಾಟಕಕಾರ ದೇವದಾಸ್ ಕಾಪಿಕಾಡ್, ನಮ್ಮ ಟಿವಿ ನಿರ್ದೆಶಕ ಶಿವಶರಣ್ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಮೋಹನ್, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಪಿಯೂಸ್ ರೊಡ್ರಿಗಸ್, ತುಳುಕೂಟ ಅಧ್ಯಕ್ಷ ಎ.ಸಿ.ಭಂಡಾರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಿಕೇಶ್ ಶೆಟ್ಟಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರತಿ ದಿನ ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು ವಿವಿಧ ಗಣ್ಯರು ಭಾಗವಹಿಸಲಿದ್ದಾರೆ, ಈ ಸಂದರ್ಭ ನಾಟಕರಂಗದ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ವಿವರಿಸಿದರು.
ಆ.7ರಂದು ರೂ ಗುರುಗಣೇಶ್ ಕುಸಾಲ್ದ ಕಲಾವಿದೆರ್ ಇವರ ಉಲಯಿ ಲೆಪ್ಪುಗಾ, ಆ.8ರಂದು ಮಾನಸ ಕಲಾವಿದೆರ್ ಫರಂಗಿಪೇಟೆ ಇವರ ನಮ್ಮ ಕತೆ ದಾದ?, ಆ.9ರಂದು ನವೋದಯ ಮಿತ್ರಮಂಡಲ ನೆತ್ತರಕೆರೆ ಇವರ ಒಂಜಿಲಾ ಅರ್ಥ ಆಪುಜಿ, ಆ.10 ರಂದು ಗೆಳಯರ ಬಳಗ ಕಲ್ಯಾರು ನರಿಕೊಂಬು ಇವರ ಎನ್ನ ತಂಗಡಿ, ಆ.11ರಂದು ಕಲಾನಿಧಿ ಕಲಾವಿದೆರ್ ನಾವೂರ ಇವರ ಗೊತ್ತಾನಗ ಪೊರ್ತಾಂಡ್, ಆ.12ರಂದು ವೃದ್ದಿ ಕಲಾವಿದೆರ್ ಶಿವಾಜಿ ಬಳಗ ಮದ್ವ ಇವರ ಭೂತದ ಕೋಣೆ, ಆ.13ರಂದು ಹರಿಣಿಕಲಾವಿದೆರ್ ಫರಂಗಿಪೇಟೆ ಇವರ ಆಯಿಲೆಕ್ಕಾಪುಂಡು ನಾಟಕಗಳ ಸ್ಪರ್ಧೆ ನಡೆಯಲಿದೆ ಎಂದರು.
ವಿಜೇತ ತಂಡಗಳಿಗೆ ಪ್ರಥಮ 20 ಸಾವಿರ, ದ್ವಿತೀಯಾ 15 ಸಾವಿರ, ತೃತೀಯ 10 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಗುವುದು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕಲಾತಂಡಗಳಿಗೆ ಪ್ರೋತ್ಸಾಹಕವಾಗಿ 5 ಸಾವಿರ ರುಪಾಯಿ ನೀಡಿ ಗೌರವಿಸಲಾಗುವುದು ಎಂದ ಅವರು ಸ್ಪರ್ಧೆಯ ಸಮಾರೋಪದ ಬಳಿಕ ಲಕುಮಿ ತಂಡದ ಬದ್ಕೆರಾದ್ ಸೈಪಿನಕುಲು ನಾಟಕ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು, ಜತೆ ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ, ಆರ್ಥಿಕ ಸಮಿತಿಯ ಸಹಸಂಚಾಲಕ ಎಂ.ಆರ್.ನೋಣಯ್ಯ, ಅಲಂಕಾರ ಸಮಿತಿಯ ರಾಜೇಂದ್ರ ಜೈನ್ ಹಾಜರಿದ್ದರು.
