ಮೂಡುಬಿದಿರೆ: ಮಹಾದಾಯಿ ನದಿಯ ನೀರನ್ನು ಬರಪೀಡಿತ ಉತ್ತರ ಕರ್ನಾಟಕದ ಜನರಿಗೆ ಹಾಗೂ ಕೃಷಿಕರಿಗೆ ದೊರಕಿಸಲು ನಡೆಸಿರುವ ಹೋರಾಟಕ್ಕೆ ಮುಖ್ಯಮಂತ್ರಿಯವರ ಬೇಜವಾಬ್ದಾರಿತನ, ಪ್ರದಾನ ಮಂತ್ರಿಯ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಲಜ್ಜೆಗೇಡಿತನದಿಂದ ಸೋಲಾಗಿದೆ. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ತಿಕ್ಕಾಟದಿಂದಾಗಿ ಉತ್ತರ ಕರ್ನಾಟಕದ ಜನರಿಗೆ ಮಾಡಿದ ಬೃಹತ್ ವಂಚನೆಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಮುಖಂಡ ರೋಬರ್ಟ್ ಎಫ್. ರೇಗೊ ಬಜ್ಪೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2015ರ ಸೆಪ್ಟೆಂಬರ್ ತಿಂಗಳಲ್ಲಿ ಆಮ್ ಆದ್ಮಿ ಪಕ್ಷದ ನಿಯೋಗವು ಮಹಾದಾಯಿ ಯೋಜನೆಯ ಕುರಿತು ಅಲ್ಲಿನ ಸ್ಥಳೀಯರ, ಹೋರಾಟಗಾರರ, ತಜ್ಞರ ವಿಸ್ಕøತ ಮಾಹಿತಿ ಪಡೆದು ಅಲ್ಲಿನ ಪ್ರದೇಶವನ್ನು ಕೂಲಂಕುಷವಾಗಿ ಪರಿಶೀಲಿಸಿದೆ. ಸಮಗ್ರ ಅಧ್ಯಯನ ಮಾಡಿ ಕೆಲವೊಂದು ಸಲಹೆಗಳನ್ನು ಮುಖ್ಯಮಂತ್ರಿಗೆ ನೀಡಿದೆ.
ವಿವಿಧ ವಿಭಾಗಗಳ ತಜ್ಞರ ವರದಿ ಪಡೆದು ಅದರ ಆಧಾರದ ಮೇಲೆ ನ್ಯಾಯಾಧೀಕರಣದಲ್ಲಿ ವಾದ ಮಂಡಿಸಬೇಕು. ಯೋಜನೆಯ ಅನುಷ್ಠಾನದಿಂದ ಉತ್ತರ ಕರ್ನಾಟಕದ ಎಷ್ಟು ಸಾವಿರ ಹಳ್ಳಿಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬಹುದೆಂಬ ವಿಸ್ಕøತ ಅಂಕಿಅಂಶಗಳ ವರದಿ ಸಲ್ಲಿಸಬೇಕು. ಉತ್ತರ ಕರ್ನಾಟಕದ ನೀರಿನ ಅಭಾವದ ಪರಿಸ್ಥಿತಿಯನ್ನು ನ್ಯಾಯಾದೀಕರಣಕ್ಕೆ ಅರಿವು ಮಾಡಿಕೊಟ್ಟು ನಾಲೆ ನಿರ್ಮಿಸಲು ಉದ್ದೇಶಿಸಿದ್ದ ಪ್ರದೇಶಗಳಿಗೆ ನೀರಿನ ಲಭ್ಯತೆ ವಿವರಗಳನ್ನು ತಜ್ಞರ ವರದಿ ಮೂಲಕ ಸಲ್ಲಿಸಬೇಕು ಎನ್ನುವ ಸಲಹೆಯನ್ನು ನೀಡಿದೆ. ಆದರೆ ಸಂಸತ್ತಿನಲ್ಲಿ ಮಹಾದಾಹಿ ಯೋಜನೆಯ ಬಗ್ಗೆ ರಾಜ್ಯದ ಸಂಸದರು ಯಾವುದೇ ಚರ್ಚೆ ನಡೆಸದಿರುವುದು ಬೇಜವಾಬ್ದಾರಿತನಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದರು.ಆಮ್ ಆದ್ಮಿ ಜಿಲ್ಲಾ ಪ್ರಮುಖರಾದ ರೋಶನ್ ಶ್ರೀ, ಹಸನಬ್ಬ ಬಜ್ಪೆ, ಪೆಟ್ರೀಶಿಯಾ ಬಜ್ಪೆ, ರಿಚರ್ಡ್ ಫೆರ್ನಾಂಡಿಸ್ ಸುದ್ದಿಗೋಷ್ಠಿಯಲ್ಲಿದ್ದರು.
ಉಗ್ರ ಹೋರಾಟ:
ಮಹಾದಾಯಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತೆ ರಾಜಕೀಯ ನಡೆಸಿ, ನ್ಯಾಯ ಒದಗಿಸುವಲ್ಲಿ ವಿಫಲವಾದರೆ ಕರ್ನಾಟಕದ ಆಮ್ ಆದ್ಮಿ ಪಕ್ಷ ಉಗ್ರಹೋರಾಟ ಮಾಡಲಿದೆ ಎಂದು ಪಕ್ಷದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
