ಮೂಡುಬಿದಿರೆ: ಆರೆಸ್ಸೆಸ್ನಲ್ಲಿ ತ್ಯಾಗ, ಸಮರ್ಪಣೆ, ಶೌರ್ಯ ಮತ್ತು ನಿರಪೇಕ್ಷ ಸೇವಾ ಭಾವನೆಯ ಸಂಕೇತವಾಗಿ ಪ್ರೇರಣೆ ನೀಡುವ ಭಗವಾದ್ವಜವನ್ನೇ ಗುರು ಎಂದು ಗೌರವಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ದೇಶ ಭಕ್ತಿ ಪ್ರಜ್ವಲನಕ್ಕೆ ಒತ್ತು ನೀಡಿದ ಸಂಘಶಕ್ತಿ ಸ್ವಾತಂತ್ರ್ಯಾನಂತರ ಜನತೆಯನ್ನು ಗುಲಾಮೀ ಭಾವನೆಯಿಂದ ಮೇಲೆತ್ತಿ ರಾಷ್ಟ್ರದ ನವನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಲು ಅಗತ್ಯವೆನಿಸಿದೆ. ಸ್ವಾತಂತ್ರ್ಯ ಪಡೆದು ಸಂಘಟಿತವಾಗಿ ಅಭಿವೃದ್ಧಿಯ ಹಾದಿಯಲ್ಲಿ ಸ್ವಾವಲಂಬಿಯಾಗಿ ಬೆಳೆಯಬೇಕಾಗಿದ್ದ ನಮ್ಮ ದೇಶದಲ್ಲಿಂದು ರಾಜಕೀಯ ಕಾರಣಗಳಿಗಾಗಿ ಏಕತೆಯನ್ನು ಒಡೆಯುವ ಕೆಲಸ ನಡೆದಿದೆ. ಇಂದು ಕಾಡುತ್ತಿರುವ ಮೆಟೀರಿಯಲಿಸಂ, ಮೆಕಾಲೆಯಿಸಂ, ಮತ್ತು ಮೈನಾರಿಟಿಸಂ ಗಂಡಾಂತರಗಳ ನಡುವೆ ರಾಷ್ಟ್ರೀಯ ಸತ್ವ, ಸ್ವಾಭಿಮಾನದ ಅರಿವು ಮತ್ತು ಅಭಿಮಾನ, ಏಕತೆಯ ಸಂಸ್ಕಾರ ಮೂಡಿಸುವ ಗುಣ ನಿರ್ಮಾಣದ ಕಾರ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ನಡೆಯುತ್ತಿದೆ ಎಂದು ಆರೆಸ್ಸೆಸ್ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯ ಕೃ. ನರಹರಿ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಮೂಡುಬಿದಿರೆ ಸ್ವರ್ಣ ಮಂದಿರದಲ್ಲಿ ನಡೆದ ಗುರುಪೂಜಾ ಉತ್ಸವದಲ್ಲಿ ಬೌದ್ಧ ಬೌದ್ಧಿಕ್ ನೀಡಿದರು.
ಅಣುಬಾಂಬು ದುರಂತಕ್ಕೆ ತುತ್ತಾದರೂ ಮತ್ತೆ ಜಪಾನ್ ಜಾಗತಿಕ ಮಾರುಕಟ್ಟೆಗೆ ಸವಾಲಾಗಿ ಬೆಳೆದು ನಿಲ್ಲುವಲ್ಲಿ ಅವರ ರಾಷ್ಟ್ರ ಹಿತಾಸಕ್ತಿ ಮತ್ತು ಟೀಂವರ್ಕ್ನ ಮಾನಸಿಕತೆ ಗಮನಾರ್ಹವಾಗಿತ್ತು. ನಮ್ಮಲ್ಲಿಂದು ಯುವ ಪೀಳಿಗೆಗೆ ಸ್ವಾತಂತ್ರ್ಯದ ಬೆಲೆ, ಬಳಿಕ ನಮ್ಮದಾಗಿದ್ದ ಕರ್ತವ್ಯ, ಜವಾಬ್ದಾರಿ, ರಾಷ್ಟ್ರೀಯ ಸತ್ವ, ಮೌಲ್ಯ ಶ್ರೇಷ್ಠತೆಯನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುವ ಕೆಲಸಗಳಾಗಬೇಕಿತ್ತು. ನಮ್ಮ ಕೀಳರಿಮೆ ತೊಡೆದು ಉಪದೇಶಕ್ಕಿಂತ ಆಚರಣೆಯೇ ಧರ್ಮವೆನ್ನುವುದರ ಪಾಲನೆಯಾಗಬೇಕು. ರಾಷ್ಟ್ರೀಯ ಅಭಿವೃದ್ಧಿಗೆ, ಸಂಸ್ಕಾರ ವೃದ್ಧಿಗೆ ಪ್ರಯತ್ನ ನಡೆಯಬೇಕಾಗಿದೆ ಎಂದವರು ಹೇಳಿದರು.
ಎಲ್ಲರ ಆರೆಸ್ಸೆಸ್:
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡುಬಿದಿರೆಯ ಮಕ್ಕಳ ತಜ್ಞ ಡಾ. ಮುರಳೀಕೃಷ್ಣ ಆರ್.ವಿ. ಸೇವೆ, ಶಿಸ್ತು, ಪಾರದರ್ಶಕತೆಯ ಹೊರತಾಗಿಯೂ ಆರೆಸ್ಸೆಸ್ ಕೇವಲ ಹಿಂದೂಗಳ ರಕ್ಷಣೆಗಿರುವ ಸಂಘಟನೆ ಎನ್ನುವ ಇಮೇಜ್ ಮತ್ತು ಭಾವನೆ ಹಲವರಲ್ಲಿದೆ. ಸ್ವಚ್ಛ ಭಾರತ್ನಂತಹ ಕಾರ್ಯಕ್ರಮಗಳಲ್ಲಿ ಆರೆಸ್ಸೆಸ್ ಎಲ್ಲರೊಂದಿಗೆ ಕೈಜೋಡಿಸಿ ಈ ಭಾವನೆಯನ್ನು ತೊಡಗಿಸುವ ಕೆಲಸವಾಗಬೇಕಾಗಿದೆ. ಎಳೆಯ ಮಕ್ಕಳಲ್ಲಿ ಸ್ವಧರ್ಮ ಶ್ರೇಷ್ಠತೆಯ ವಿಷ ಬೀಜಗಳನ್ನು ಬಿತ್ತಲಾಗುತ್ತಿದೆ ಎನ್ನುವ ಆತಂಕದ ವಾತಾವರಣದ ನಡುವೆಯೂ ಆರೆಸ್ಸೆಸ್ ಎಳೆಯರಲ್ಲಿ ಸರ್ವ ಧರ್ಮಗಳ ಶ್ರೇಷ್ಠತೆಯನ್ನು ಗೌರವಿಸಿಸುವ ಪ್ರೀತಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಎತ್ತರಕ್ಕೆ ಬೆಳೆದಿರುವ ಆರೆಸ್ಸೆಸ್ ಅಗಲವಾಗಿಯೂ ವಿಸ್ತರಿಸಿಕೊಳ್ಳಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು.
ಮೂಡುಬಿದಿರೆ ಸಂಘ ಚಾಲಕ ಎಂ. ವಾಸುದೇವ ಭಟ್ ಉಪಸ್ಥಿತರಿದ್ದರು. ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿ ಅಜಿತ್ ಕುಮಾರ್ ವಂದಿಸಿದರು. ಡಾ. ಕೇಶವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ದೇವಿ ಪ್ರಸಾದ್ ಶೆಟ್ಟಿ ವೈಯಕ್ತಿಕ ಗೀತೆ ಹಾಡಿದರು. ದೀಪಕ್ ಅಮೃತವಚನ ವಾಚಿಸಿದರು. ಸಮಾರಂಭದಲ್ಲಿ ಗುರುಕಾಣಿಕೆ ಸಮರ್ಪಣೆ, ಗುರು ವಂದನೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು, ಪ್ರಮುಖರು, ಹಿತೈಶಿಗಳು ಭಾಗಿಯಾಗಿದ್ದರು.
—
