ಲಕ್ನೋ,ಉಪ್ರ.: ಕಳೆದ ಕೆಲವು ತಿಂಗಳುಗಳಿಂದ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆದಿರುವ, ಕೋಮುಗಲಭೆಯಿಂದ ಜರ್ಝರಿತವಾಗಿರುವ ಉತ್ತರಪ್ರದೇಶದ ಮುಜಾಫರ್’ನಗರದಲ್ಲಿ ಮತ್ತೊಂದು ಹತ್ಯೆ ನಡೆದಿದೆ. ಸ್ಥಳೀಯ ಬಿಜೆಪಿ ಮುಖಂಡ ಓಂವೀರ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆಯಿಂದಾಗ ಬಿಜೆಪಿ ಮುಖಂಡರ ಜೀವಕ್ಕೆ ಅಪಾಯ ಒದಗಿದಂತಾಗಿದೆ.

ಮೀರಾಪುರದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರಾಗಿದ್ದ 40 ವರ್ಷದ ಓಂವೀರ್ ತಮ್ಮ ಮನೆಯಿಂದ ತೋಟಕ್ಕೆ ನಡೆದುಹೋಗುವಾಗ ಬೈಕ್’ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಓಂವೀರ್ ತಮ್ಮ ರಿವಾಲ್ವರ್’ನಿಂದ ಪ್ರತಿದಾಳಿ ನಡೆಸಲು ಯತ್ನಿಸಿದ್ದರು. ಆದರೆ, ಪ್ರಯೋಜನವಾಗಲಿಲ್ಲ. ತೀವ್ರವಾಗಿ ಗಾಯಗೊಂಡಿದ್ದ ಓಂವೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎರಡು ದಿನಗಳ ಹಿಂದಷ್ಟೇ ನೋಯ್ಡಾದಲ್ಲಿ ಬಿಜೆಪಿ ನಾಯಕ ವಿಜಯ್ ಪಂಡಿತ್ ಅವರನ್ನ ಹತ್ಯೆಗೈಯಲಾಗಿತ್ತು. ಅಲ್ಲಿಯೂ ಕೂಡ ಎರಡು ಬೈಕ್’ಗಳಲ್ಲಿ ಬಂದ ದುಷ್ಕರ್ಮಿಗಳು ಬಿಜೆಪಿ ನಾಯಕನನ್ನ ಗುಂಡಿಕ್ಕಿ ಕೊಂದುಹಾಕಿದ್ದರು.
ಕಳೆದ ವರ್ಷದ ಸೆಪ್ಟಂಬರ್’ನಲ್ಲಿ ಮುಜಾಫರ್’ನಗರದಲ್ಲಿ ನಡೆದಿದ್ದ ಕೋಮುಗಲಭೆಗಳಲ್ಲಿ 62 ಜನರು ಬಲಿಯಾಗಿದ್ದರು. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
