ಬಂಟ್ವಾಳ :ಕಡಲುಕೊರೆತ ಪ್ರದೇಶಗಳ ಸಮುದ್ರ ಕಿನಾರೆಗೆ ಹಾಕಲೆಂದು ತುಂಬೆ ಗ್ರಾಮದ ವಳವೂರು ರಾಷ್ಟ್ರಿಯ ಹೆದ್ದಾರಿ ಪಕ್ಕದಿಂದ ಬಂಡೆಕಲ್ಲುಗಳನ್ನು ಸಾಗಿಸುವ ಟಿಪ್ಪರ್ ಲಾರಿಗಳಿಂದಾಗಿ ವಳವೂರು ಗ್ರಾಮ ಪಂಚಾಯತ್ ಸಂಪರ್ಕ ಕಲ್ಪಿಸುವ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕೆಸರುಮಯವಾಗಿದ್ದು ಇದರ ವಿರುದ್ಧ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ಪಕ್ಕದಲ್ಲಿರುವ ಗುಡ್ಡೆಯೊಂದರಿಂದ ಬಂಡೆ ಕಲ್ಲುಗಳನ್ನು ಹಿಟಚಿ ಯಂತ್ರಗಳ ಮೂಲಕ ಒಡೆದು ಟಿಪ್ಪರ್ ಲಾರಿಗಳಿಗೆ ತುಂಬಿಸಿ ಸಾಗಿಸಲಾಗುತ್ತಿದ್ದೆ. ಕಲ್ಲು ತೆಗೆಯುವ ಪ್ರದೇಶದಲ್ಲಿ ಮಳೆಯಿಂದಾಗಿ ಸಂಪೂರ್ಣ ಕೆಸರು ತುಂಬಿದೆ. ಕಲ್ಲುಗಳನ್ನು ಹೊತ್ತುಕೊಂಡು ಸಾಗುವ ಟಿಪ್ಪರ್ ಲಾರಿಗಳ ಚಕ್ರದಲ್ಲಿ ಅಂಟಿರುವ ಕೆಸರು ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಬಿದ್ದು ಇಲ್ಲಿನ ಹೆದ್ದಾರಿ ಕೆಸರುಮಯವಾಗಿದ್ದು ಹೆದ್ದಾರಿಯಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಅಲ್ಲದೆ ಟಿಪ್ಪರ್ ಲಾರಿಗಳು ಎಡೆಬಿಡದೆ ಸಂಚಾರಿಸುವುದರಿಂದ ಗ್ರಾಮ ಪಂಚಾಯತ್ಗೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡಾ ಕೆಸರಿನಿಂದ ಕೂಡಿದ್ದು ಸಾರ್ವಜನಿಕರು ನಡೆದಾಡದಂತಾಗಿದೆ.

ಬಂಡೆಕಲ್ಲು ಸಾಗಾಟದಿಂದ ರಸ್ತೆಗಳು ಕೆಸರುಮಯವಾದ ವಿರುದ್ಧ ಸ್ಥಳೀಯರು ಜನರು ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ ಇವರಿಗೆ ದೂರು ನೀಡಿದರು. ಗ್ರಾಮಸ್ಥರ ದೂರಿಗೆ ತಕ್ಷಣ ಸ್ಪಂದಿಸಿದ ಉಪಾಧ್ಯಕ್ಷ ಕೂಡಲೇ ಸ್ಥಳಕ್ಕೆ ಧಾವಿಸಿ ಬಂಡೆಕಲ್ಲು ತೆಗೆಯುವ ಕೆಲಸವನ್ನು ನಿಲ್ಲಿಸಿದರಲ್ಲದೆ ಟಿಪ್ಪರ್ ಲಾರಿಗಳನ್ನು ಕೂಡಾ ಕಲ್ಲು ಸಾಗಾಟ ಮಾಡದಂತೆ ತಡೆದು ನಿಲ್ಲಿಸಿದರು. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಪೊಲೀಸರನ್ನು ಸ್ಥಳಕ್ಕೆ ಕರೆಸಿ ರಸ್ತೆಯನ್ನು ಹಾಲು ಮಾಡುವ ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವಲವೂರು ರಾಷ್ಟ್ರೀಯ ಹೆದ್ದಾರಿ ಅಪಘಾತ ವಲಯವಾಗಿದ್ದು ಇತ್ತೀಚಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಹತ್ತಾರು ಅಪಘಾತಗಳು ಸಂಭವಿಸಿವೆ. ಕಡಲು ಕೊರೆತ ಪ್ರದೇಶಕ್ಕೆ ಬಂಡೆಕಲ್ಲುಗಳನ್ನು ಸಾಗಿಸುವ ಲಾರಿಗಳಿಂದಾಗಿ ಹೆದ್ದಾರಿಯುದ್ದಕ್ಕೂ ಭಾರೀ ಪ್ರಮಾಣದಲ್ಲಿ ಕೆಸರು ಬಿದ್ದಿದ್ದು ಇದರಿಂದಾಗಿ ಇನ್ನಷ್ಟು ಅಪಘಾತಗಳು ಸಂಭವಿಸುವ ಅಪಾಯವಿದೆ. ಅಲ್ಲದೆ ಗ್ರಾಪಂಗೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡಾ ಕೆಸರಿನಿಂದ ಕೂಡಿದ್ದು ಜನರಿಗೆ ನಡೆದಾಡಲು ಅಸಾಧ್ಯವಾಗಿದೆ. ರಸ್ತೆಗಳು ಕೆಸರಾಗದಂತೆ ಕ್ರಮ ವಹಿಸಿದರೆ ಮಾತ್ರ ಕಲ್ಲು ಸಾಗಾಟಕ್ಕೆ ಅನುವು ಮಾಡಿ ಕೊಡಲಾಗುವುದು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಕಲ್ಲು ಸಾಗಾಟಕ್ಕೆ ಬಿಡುವುದಿಲ್ಲ ಎಂದು ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ ಇದೇ ಸಂದರ್ಭದಲ್ಲಿ ತಿಳಿಸಿದರು.


