ಬಂಟ್ವಾಳ: ತಾಲ್ಲೂಕಿನಲ್ಲಿ ಕಳೆದ ತಿಂಗಳು ಭಾರೀ ಗಾಳಿ ಮಳೆಯಿಂದ ಮನೆ ಮತ್ತು ತೋಟಗಾರಿಕಾ ಬೆಳೆಗೆ ಹಾನಿಗೀಡಾದ ಸಂತ್ರಸ್ತರಿಗೆ ಪ್ರಾಕೃತಿಕ ವಿಕೋಪದಡಿ ರೂ 12.18 ಲಕ್ಷ ಮೊತ್ತದ ಪರಿಹಾರಧನ ಚೆಕ್ಕನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭಾನುವಾರ ಸಂಜೆ ವಿತರಿಸಿದರು. ಒಟ್ಟು 458 ಮಂದಿಗೆ ತೋಟಗಾರಿಕಾ ಬೆಳೆಹಾನಿ, 65 ಮಂದಿಗೆ ಪಕ್ಕಾ ಮನೆ ಭಾಗಶ ಹಾನಿ, ಐದು ಮಂದಿಗೆ ಕಚ್ಚಾ ಮನೆ ಭಾಗಶ: ಹಾನಿ ಹೀಗೆ ಪರಿಹಾರಧನ ಚೆಕ್ ವಿತರಿಸಿದರು.

ತೋಟಗಾರಿಕಾ ಬೆಳೆಹಾನಿಗೆ ಒಟ್ಟು ರೂ 9,19,406, ಪಕ್ಕಾ ಮನೆ ಭಾಗಶಃ ಹಾನಿಗೆ ಒಟ್ಟು ರೂ 2,83,850, ಕಚ್ಚ ಮನೆ ಹಾನಿಗೆ ಒಟ್ಟು ರೂ 14,800 ಹೀಗೆ ಈಗಾಗಲೇ ಒಟ್ಟು ರೂ 50ಲಕ್ಷಕ್ಕೂ ಮಿಕ್ಕಿ ಮೊತ್ತದ ಪರಿಹಾರಧನ ವಿತರಿಸಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಶಾಹುಲ್ ಹಮೀದ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ಭೂ ಅಬಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಉಪಾಧ್ಯಕ್ಷ ಕೆ. ಸಂಜೀವ ಪೂಜಾರಿ, ನಾಮ ನಿರ್ದೇಶಿತ ಸದಸ್ಯ ಪ್ರಕಾಶ್ ಬಿ. ಶೆಟ್ಟಿ ತುಂಬೆ, ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕರಾದ ನಾರಾಯಣ ಪೂಜಾರಿ, ದಿವಾಕರ ಮುಗುಳ್ಯ, ಆಸೀಫ್ ಇಕ್ಬಾಲ್ ಮತ್ತಿತರರು ಇದ್ದರು.
