ವಿದ್ಯೆ ಶಾಶ್ವತ ಸಂಪತ್ತು: ಸಚಿವ ರೈ
ಬಂಟ್ವಾಳ: ಜೀವನದಲ್ಲಿ ಯಾವುದೇ ಆಸ್ತಿ ಮತ್ತು ಐಶ್ವರ್ಯಕ್ಕೂ ಮಿಗಿಲಾದ ಶಿಕ್ಷಣವು ಮಾತ್ರ ಶಾಶ್ವತ ಸಂಪತ್ತು. ಇದಕ್ಕಾಗಿ ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಸ್ವಾಭಿಮಾನಿ ಮತ್ತು ಸದೃಢವಾಗಿ ಬೆಳೆಯಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ತಾಲ್ಲೂಕಿನ ಬಡ್ಡಕಟ್ಟೆಯಲ್ಲಿ ಸ್ಥಳೀಯ ಪುರಸಭಾ ಸದಸ್ಯ ಪ್ರವೀಣ ಬಿ. ಇವರ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅರ್ಹ ಬಡ ವಿದ್ಯಾರ್ಥಿಗಳಿಗೆ 3ನೇ ವರ್ಷದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು. ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯ ಗಂಗಾಧರ ಪೂಜಾರಿ, ರಂಗಕಲಾವಿದ ಸುಂದರ ರೈ ಮಂದಾರ, ಸಿಪಿಎಂ ಮುಖಂಡ ಸಂಜೀವ ಬಂಗೇರಾ, ಹೊಸ್ಮಾರ್ ಫ್ರೆಂಡ್ಸ್ ಸಂಘಟನೆ ಅಧ್ಯಕ್ಷ ಸೇಸಪ್ಪ ಸುವರ್ಣ ಮತ್ತಿತರರು ಶುಭ ಹಾರೈಸಿದರು. ಪ್ರಮುಖರಾದ ಶ್ರೀನಿವಾಸ ಶೆಟ್ಟಿ, ಜನಾರ್ದನ ಕುಲಾಲ್, ಯತೀನ್ ಕುಲಾಲ್, ಯಶೋಧರ ಪೂಜಾರಿ, ಪದ್ಮನಾಭ ಸಾಲ್ಯಾನ್, ಸವಿನ್ ಶೆಟ್ಟಿ ಮತ್ತಿತರರು ಇದ್ದರು.
ಪುರಸಭಾ ಸದಸ್ಯ ಪ್ರವೀಣ್ ಬಿ.ಸ್ವಾಗತಿಸಿ, ಮಾಜಿ ಸದಸ್ಯ ಉದಯ ಕುಮಾರ್ ಮಂಡಾಡಿ ವಂದಿಸಿದರು, ರಂಗಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
