ಬಂಟ್ವಾಳ:ತಾಲ್ಲೂಕಿನ ವಿವಿಧೆಡೆ ಇದೇ 17ರಂದು ರಾತ್ರಿ ನಡೆದ ಬೀಸಿದ ಭಾರೀ ಗಾಳಿ ಮಳೆಗೆ ಮನೆ ಮತ್ತು ತೋಟಗಾರಿಕಾ ಬೆಳೆ ಹಾನಿಗೀಡಾದ ಅರ್ಹ ಸಂತ್ರಸ್ತರಿಗೆ ಈಗಾಗಲೇ ಒಟ್ಟು ರೂ 37.19 ಲಕ್ಷ ಮೊತ್ತದ ಪರಿಹಾರಧನ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ತಾಲ್ಲೂಕಿನ ವಿವಿಧೆಡೆ ಈಚೆಗೆ ನಡೆದ ಭಾರೀ ಗಾಳಿ ಮಳೆಗೆ ಮನೆ ಮತ್ತು ತೋಟಗಾರಿಕಾ ಬೆಳೆ ಹಾನಿಗೀಡಾದ ಒಟ್ಟು 440 ಮಂದಿ ಸಂತ್ರಸ್ತರಿಗೆ ರೂ 17.19ಲಕ್ಷ ಮೊತ್ತದ ಪರಿಹಾರಧನ ಚೆಕ್ಕನ್ನು ಶುಕ್ರವಾರ ಸಂಜೆ ವಿತರಿಸಿ ಅವರು ಮಾತನಾಡಿದರು. ಕಳೆದ ವಾರ ಒಟ್ಟು 300 ಮಂದಿಗೆ ರೂ 20ಲಕ್ಷ ಮೊತ್ತದ ಪರಿಹಾರಧನ ವಿತರಿಸಲಾಗಿದ್ದರೂ ಕೆಲವರು ಅನಗತ್ಯ ಆರೋಪ ಮಾಡುತ್ತಿದ್ದಾರೆ. ಈಗಾಗಲೇ ಬೆಳೆ ಹಾನಿ ಬಗ್ಗೆ ಪರಿಶೀಲನೆ, ದಾಖಲೀಕರಣ, ಸಮೀಕ್ಷೆ ನಡೆಯುತ್ತಿದ್ದು, ಮತ್ತೆ ಇದೇ 31ರಂದು ಪರಿಹಾರಧನ ನೀಡುವುದಾಗಿ ಸಂತ್ರಸ್ತರಿಗೆ ತಿಳಿಸಲಾಗಿದೆ ಎಂದರು.

ಚೆಕ್ ವಿತರಣೆ: ಬೆಳಗ್ಗೆ ನಡೆದ ಪ್ರತಿಭಟನೆಗೆ ಮಣಿದ ತಾಲೂಕು ಆಡಳಿತ ಸಚಿವ ರಮಾನಾಥ ರೈ ಅವರ ನಿರ್ದೇಶನದಂತೆ ಸಂಜೆ ಅವರ ಕಚೇರಿಯಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಲಾಯಿತು. ತಾಲೂಕಿನ ವಿವಿಧ ಗ್ರಾಮಗಳ ಒಟ್ಟು 440 ಮಂದಿಗೆ ಸುಮಾರು 17.99 ಲಕ್ಷ ರೂ. ಪರಿಹಾರದ ಚೆಕನ್ನು ಸಂತ್ರಸ್ತರಿಗೆ ವಿತರಿಸಲಾಗಿದೆ. ಮುಂದಿನ ಮೇ 31ರ ಒಳಗಾಗಿ ಪ್ರಾಕೃತಿಕ ವಿಕೋಪದಲ್ಲಿ ನಷ್ಟಕ್ಕೊಳಗಾದ ಎಲ್ಲಾ ಸಂತ್ರಸ್ತರಿಗೂ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ರೈ ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಪದ್ಮಶೇಕರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ತಾಪಂ ಸದಸ್ಯ ಪ್ರಭಾಕರ್ ಪ್ರಭು, ತಹಶೀಲ್ದಾರ್ ಪುರಂದರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
