ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಪೇಟೆ ಬಳಿ ಟ್ಯಾಂಕರ್ ಹಾಗೂ ತೂಫಾನ್‌ಟೆಂಪೊ ನಡುವೆ ಸೋಮವಾರ ಸಂಜೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ತಾಯಿ-ಮಗು ಸಹಿತ ಮೂವರು ಮೃತಪಟ್ಟಿದ್ದು, 13 ಮಂದಿಗೆ ಗಾಯವಾಗಿದೆ.

ತೂಫಾನ್ ಟೆಂಪೊ ಚಾಲಕ ತಿಪ್ಪೇಸ್ವಾಮಿ (23), ಶ್ವೇತಾ (24) ಹಾಗೂ ಆಕೆಯ ಒಂದೂವರೆ ವರ್ಷದ ಮಗು ಗಣೇಶ್ ಮೃತರು. ರಶ್ಮಿ, ಜಗದೀಶ್, ಲಲಿತಮ್ಮ, ಮನೋಹರ್, ಲತಾ, ದರ್ಶನ್, ಮಧುಸೂದನ್, ಚಂದನ, ಇಂದು, ಶಿವಕುಮಾರ್, ಮೇಘಾ, ಕರಿಬಸಪ್ಪ, ವೀಣಾ, ಮಂಜುನಾಥ್ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
nelyadi (2)

 

nelyadi

nelyadi (1)
ತೂಫಾನ್ ಟೆಂಪೊದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ದಾವಣಗೆರೆಯ ನಾಗನೂರಿನವರು. ಅದರಲ್ಲೂ ಚಾಲಕ ಹೊರತುಪಡಿಸಿ ಉಳಿದವರೆಲ್ಲರೂ ಒಂದೇ ಕುಟುಂಬದವರು.
ನಾಗನೂರಿನ ವೀರಪ್ಪ ಮಾಸ್ಟರ್ ಅವರ ಕುಟುಂಬ ವರ್ಗ ತೀರ್ಥಕ್ಷೇತ್ರ ಸಂದರ್ಶನಕ್ಕೆಂದು ಆಗಮಿಸಿದ್ದರು. ವೀರಪ್ಪ ಮಾಸ್ಟರ್ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಲಲಿತಮ್ಮ ಅವರೊಂದಿಗೆ ಕುಟುಂಬದ 15 ಮಂದಿ ತೂಫಾನ್ ಟೆಂಪೊದಲ್ಲಿ ಪ್ರಯಾಣಿಸುತ್ತಿದ್ದರು.

ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಶಿರಾಡಿ ಪೇಟೆ ಬಳಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಟ್ಯಾಂಕರ್ ಚಾಲಕ ತೀರಾ ಬಲಬದಿಗೆ ವಾಹನ ಚಲಾಯಿಸಿಕೊಂಡು ಬಂದಿದ್ದೇ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಅಪಘಾತ ನಡೆದ ತಕ್ಷಣ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ತೀವ್ರತೆಗೆ ತೂಫಾನ್ ಟೆಂಪೊ ಚಾಲಕ ತಿಪ್ಪೇಸ್ವಾಮಿ ಸ್ಥಳದಲ್ಲೇ ಮೃತಪಟ್ಟರೆ, ಶ್ವೇತಾ ಹಾಗೂ ಆಕೆಯ ಮಗು ಗಣೇಶ್ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಹರಕೆಯ ಮಗು: ಘಟನೆಯಲ್ಲಿ ಮೃತಪಟ್ಟ ಶ್ವೇತಾಗೆ ವಿವಾಹವಾಗಿ ಬಹಳ ವರ್ಷ ಮಗು ಜನಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹರಕೆ ಹೇಳಿ ಗಣೇಶ ಎಂಬ ಮಗು ಜನಿಸಿದೆಯಂತೆ. ಈ ಹಿನ್ನೆಲೆಯಲ್ಲಿ ಒಂದೇ ಕುಟುಂಬ 15 ಮಂದಿ ಸದಸ್ಯರು ತೀರ್ಥಕ್ಷೇತ್ರ ಸಂದರ್ಶನಕ್ಕೆಂದು ಬಂದಿದ್ದಾರೆ. ದುರದೃಷ್ಟವೆಂದರೆ ಶ್ವೇತಾ ಹಾಗೂ ಆಕೆಯ ಮಗು ಗಣೇಶ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ನೆಟ್‌ವರ್ಕ್ ಇರಲಿಲ್ಲ: ಅಪಘಾತ ನಡೆದ ಜಾಗ ನೆಟ್‌ವರ್ಕ್ ಇಲ್ಲದ ಸ್ಥಳ. ಹಾಗಾಗಿ ಮಾಹಿತಿ ರವಾನಿಸಲು ಕಷ್ಟಸಾಧ್ಯವಾಗಿತ್ತು. ಇದೇ ಕಾರಣಕ್ಕಾಗಿ ಆಂಬ್ಯುಲೆನ್ಸ್, ಪೊಲೀಸರು ಸ್ಥಳಕ್ಕೆ ಬರುವಾಗ ಒಂದು ಗಂಟೆ ತಡವಾಗಿದೆ.

ಸ್ಥಳೀಯರು ಮತ್ತು ಕ್ರೇನೊಂದರ ಮಾಲೀಕ ಸುಭಾಶ್ ಎಂಬವರು ಪೊಲೀಸರು ಹಾಗೂ ಆಂಬ್ಯುಲೆನ್ಸ್‌ಗೆ ಮಾಹಿತಿ ನೀಡಿದ್ದಲ್ಲದೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ನೆಲ್ಯಾಡಿ ಹಾಗೂ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಪೊಲೀಸರು ಕೇಸು ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *