ಬಂಟ್ವಾಳ: ಕಾಡುಪ್ರಾಣಿಗಳು ನಾಡಿಗೆ ಬಂದು ಉಪಟಳ ಕೊಡುತ್ತದೆ ಎನ್ನುವ ಆತಂಕ ನಾಗರೀಕರದ್ದಾದರೆ, ಕಾಡುಗಳ ನಾಶವಾದಂತೆ ಕಾಡುಪ್ರಾಣಿಗಳ ದಿಕ್ಕು ತೋಚದಂತಿರುವ ಸ್ಥಿತಿ ಯಾರಿಗೂ ಅರ್ಥವಾಗುತ್ತಿಲ್ಲ. ಈ ನಿಟ್ಟಿನಲ್ಲಿ ವನಗಳನ್ನು ಉಳಿಸಿ, ವನ್ಯಪ್ರಾಣಿಗಳನ್ನೂ ಉಳಿಸಿ ಎನ್ನುವ ಸಂದೇಶ ಸಾರುತ್ತಿದೆ ಈ ಗೋರಿಲ್ಲ. ಎಚ್ಚರ ಮಾನವ ಎಚ್ಚರ ಎನ್ನುವ ಸಂದೇಶ ನೀಡುವ ಈ ಗೋರಿಲ್ಲ 9 ಅಡಿ ಎತ್ತರ ವಿದ್ದು, ಪ್ರಾಣಿಗಳಿಗೆ ಅಪಾಯವನ್ನುಂಟು ಮಾಡುವ ಮಾನವನನ್ನು ಪಂಜರದೊಳಗೆ ಬಂಧಿಯಾಗಿಸುವ ಎಚ್ಚರಿಕೆ ನೀಡುತ್ತಿದೆ.

ಗೊಂಬೆ ಕುಣಿತ, ಕೀಲುಕುದುರೆ, ಬೃಹತ್ ಯಕ್ಷಗಾನ ವೇಷಗಳು ಸೇರಿದಂತೆ ವಿವಿಧ ಬಗೆಯ ಗೊಂಬೆಗಳನ್ನು ದ.ಕ.ಜಿಲ್ಲೆಗೆ ಪರಿಚಯಿಸುವುದರೊಂದಿಗೆ ಕಲ್ಲಡ್ಕದ ಹೆಸರನ್ನು ನಾಡಿನೆಲ್ಲೆಡೆ ಪಸರಿಸಿದ ಕಲ್ಲಡ್ಕ ಶಿಲ್ಪಾಗೊಂಬೆ ಬಳಗದ ಮಾಲಕ ರಮೇಶ್ ಕಲ್ಲಡ್ಕ ರವರ ಪರಿಕಲ್ಪನೆಯಲ್ಲಿ ಮೂಡಿ ಬಂದಿದೆ ಈ ದೊಡ್ಡ ಗೋರಿಲ್ಲಾ. ಪ್ರತೀವರ್ಷ ಹೊಸಹೊಸ ಗೊಂಬೆಗಳ ಜೊತೆಯಲ್ಲಿ ಬಳಗವನ್ನು ಮತ್ತಷ್ಟು ಆಕರ್ಷಕವನ್ನಾಗಿಸುವ ರಮೇಶ್ ಅವರು ಈ ಬಾರಿ ಪೂಂಜಾಲಕಟ್ಟೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಂದರ್ಭ ಎಚ್ಚರ ಮಾನವ ಎಚ್ಚರ ಎನ್ನುವ ಜಾಗೃತಿ ಮೂಡಿಸುವ ಬೃಹತ್ ಗೋರಿಲ್ಲ ಶಿಲ್ಪಾ ಗೊಂಬೆ ಬಳಗವನ್ನು ಸೇರಿಕೊಂಡಿದೆ.
