ಮೂಡುಬಿದಿರೆ: ಮೂಡುಬಿದಿರೆಯಿಂದ ವಿದ್ಯಾಗಿರಿ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ಮೂಡುಬಿದರೆಯ ಗಾಂಧಿನಗರದಲ್ಲಿ ನಡೆದಿದೆ.

ಪುತ್ತಿಗೆ ಪದವು ನಿವಾಸಿ ನಾರಾಯಣ ಕುಲಾಲ(45) ದುರ್ಮರಣಕ್ಕೀಡಾದ ಆಟೋ ಚಾಲಕ. ಮೂಡುಬಿದರೆಯಿಂದ ವಿದ್ಯಾಗಿರಿ ಕಡೆಗೆ ಬಾಡಿಗೆಗೆ ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಎದುರಿಗೆ ಬರುತ್ತಿದ್ದ ವಾಹನವೊಂದಕ್ಕೆ ಜಾಗಬಿಟ್ಟುಕೊಡುವ ಭರದಲ್ಲಿ ಆಟೋ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡ ನಾರಾಯಣ ಅವರು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಆಟೋದಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
