ಬಂಟ್ವಾಳ: ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅಂದಿನ ಸಂವಿಧಾನ ರಚನಾ ಸಮಿತಿ ಅಧ್ಯಕ್ಷ ಡಾ.ಬಾಬೂ ರಾಜೇಂದ್ರ ಪ್ರಸಾದ್ ಅವರ ದೂರದರ್ಶಿತ್ವದ ಯೋಚನೆಯಿಂದ ಇಲ್ಲಿನ ಸಂವಿಧಾನ ಬಲಿಷ್ಟವಾಗಿದೆ ಎಂದು ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮಹಮ್ಮದ್ ಸಾಲೆ ಹೇಳಿದರು.
ತಾಲ್ಲೂಕಿನ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ 67ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರಮುಖರಾದ ನಾರಾಯಣ ಭಟ್ ನೂಜಿಬೈಲ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸ ಆಚಾರ್ಯ ಮಂಚಿ, ದಿವಾಕರ ನಾಯಕ್ ಕುಂಟೂರು, ಬದ್ರುದ್ದೀನ್ ಕೈಯೂರು, ಉದಯಕುಮಾರ್ ರಾವ್, ಇಸ್ಮಾಯಿಲ್ ಕೋಕಳ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ವಿ. ಶ್ರೀರಾಮಮೂರ್ತಿ ಸ್ವಾಗತಿಸಿ, ದೈಹಿಕ ಶಿಕ್ಷಕ ರಾಜೇಶ್ ವಂದಿಸಿದರು. ಕಲಾ ಶಿಕ್ಷಕ ಜಗನ್ನಾಥ ಪುರುಷ ಕಾರ್ಯಕ್ರಮ ನಿರೂಪಿಸಿದರು.
