ಮೂಡುಬಿದರೆ: ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿದ ತಂಡವೊಂದು ಮನೆಯ ಬಾಗಿಲು ಮತ್ತು ಕಿಟಕಿ ಮುರಿದು, ಮಹಿಳೆಗೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಪ್ರಾಂತ್ಯದಲ್ಲಿ ಶನಿವಾರ ನಡೆದಿದೆ.
ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಪ್ರಾಂತ್ಯದ ಆಯಿಶಾ ಮಂಜಿಲ್ಗೆ ಬೈಕ್ ಮತ್ತು ರಿಕ್ಷಾದಲ್ಲಿ ಎಂಟು ಮಂದಿ ಬಂದಿದ್ದು ಅವರ ಕೈಯಲ್ಲಿ ಸುತ್ತೆ, ಕಬ್ಬಿಣದ ರಾಡ್ ಇನ್ನಿತರ ಮಾರಕಾಯಧಗಳಿತ್ತೆನ್ನಲಾಗಿದೆ. ಆರೋಪಿಗಳು ಮನೆಗೆ ಅಕ್ರಮ ಪ್ರವೇಶಿಸಿದಾಗ ಮನೆಯಲ್ಲಿದ್ದ ಒಂಟಿ ಮಹಿಳೆ ಪ್ರತಿಭಟಸಿ ಬೊಬ್ಬೆ ಹೊಡೆದರೆನ್ನಲಾಗಿದೆ. ಆರೋಪಿಗಳ ಪೈಕಿ ಅಪ್ಸರ್, ಇಕ್ಬಾಲ್ ಮತ್ತು ವಸೀಂ ಮಹಿಳೆಯನ್ನು ದೂಡಿ ಹಾಕಿ, ನೈಟಿ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆನ್ನಲಾಗಿದ್ದು ಈ ವೇಳೆ ಮಹಿಳೆಯ ಬೊಬ್ಬೆ ಕೇಳಿ ನೆರೆಮನೆಯವರು ರಕ್ಷಣೆಗೆ ಬಂದರೆನ್ನಲಾಗಿದೆ. ನಂತರ ಆರೋಪಿಗಳು ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಬಲತ್ಕಾರವಾಗಿ ತೆಗೆದು ರಿಕ್ಷಾದಲ್ಲಿ ಸಾಗಾಟ ಮಾಡಿದ್ದಾರೆನ್ನಾಗಿದೆ. ಆಸ್ತಿ ವಿವಾದವೆ ಘಟನೆಗೆ ಕಾರಣವಾಗಿದೆ.
ಒಂದು ವಾರದೊಳಗೆ ಮನೆ ಖಾಲಿ ಮಾಡದಿದ್ದರೆ ಬಲವಂತದಿಂದ ಮನೆಯಿಂದ ಹೊರಹಾಕಲಾಗುವುದೆಂದು ಆರೋಪಿಗಳು ಮಹಿಳೆಗೆ ಎಚ್ಚರಿಕೆ ನೀಡಿ ಹೋಗಿದ್ದಾರೆ. ಎಂಟು ಮಂದಿ ಆರೋಪಿಗಳ ಪೈಕಿ ಉಳಿದ ಐವರ ಪರಿಚಯ ಮಹಿಳೆಗೆ ಸಿಕ್ಕಿರಲಿಲ್ಲ ಎನ್ನಲಾಗಿದೆ. ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
