ಮೂಡುಬಿದಿರೆ: ಲಾಡಿ ಮಸೀದಿಯ ಧರ್ಮಗುರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಸ್ಥಳೀಯ ಅಬೂಬಕರ್ ಅವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶನಿವಾರ ಮುಂಜಾನೆ 5ರವೇಳೆಗೆ ಮಸೀದಿಗೆ ತೆರಳಿದ್ದ ಅಬೂಬಕರ್ ನಮಾಜು ಮಾಡಿ ಹೊರಬಂದಾಗ ಮೌಲ್ವಿ ಇಬ್ರಾಹಿಂ ದಾರಿಮಿ ಮದರಸದಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿರುವುದನ್ನು ಗಮನಿಸಿದ್ದಾರೆ. ದಾರಿಮಿಯವರದ್ದು ಪ್ರಚೋದನಕಾರೀ ಪ್ರವಚನ ಏಕೆ ಕೇಳುತ್ತೀರಿ? ಹೊರಗೆ ಬನ್ನಿ ಎಂದು ಅಲ್ಲಿನ ಕೆಲವು ಮಕ್ಕಳಿಗೆ ಹೇಳಿ ಮಸೀದಿ ಆವರಣದಿಂದ ಬಂದಿದ್ದಾರೆ. ನಂತರ ಮತ್ತೊಮ್ಮೆ ಕೆಲ ಹೊತ್ತಿನ ಬಳಿಕ ಮಸೀದಿಗೆ ತೆರಳಿದ್ದ ಅಬೂಬಕರ್ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಮೌಲ್ವಿಯವರು ಏಕಾಏಕಿ ಬಂದು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ಅಬೂಬಕರ್ ದೂರಿನಲ್ಲಿ ತಿಳಿಸಿದ್ದಾರೆ.
ಸೊಂಟ ಮತ್ತು ಬಲಕೈ ಗಾಯವಾಗಿ ಅಬೂಬಕರ್ ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
