ಬಂಟ್ವಾಳ:ಕೇಂದ್ರ ಸರ್ಕಾರವು ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಹೊಂದಿದ್ದರೆ ಕುಮ್ಕಿ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತಡೆ ಆದೇಶಕ್ಕೆ ಲೋಕಸಭೆಯಲ್ಲಿ ತಿದ್ದುಪಡಿ ತಂದು ರೈತರ ಕುಮ್ಕಿ ಹಕ್ಕನ್ನು ಮತ್ತೆ ನೀಡಿ ಕೃಷಿ ಚಟುವಟಿಕೆಗೆ ಬೆಂಬಲ ನೀಡಬೇಕು ಎಂದು ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್ ಆಗ್ರಹಿಸಿದ್ದಾರೆ.
ಅವಿಭಜಿತ ಜಿಲ್ಲೆಯಲ್ಲಿ ಕೃಷಿ ಭೂಮಿಗೆ ಸೊಪ್ಪು ಸಹಿತ ಗೋವುಗಳಿಗೆ ಮೇವು ಮತ್ತು ಹಟ್ಟಿಗೊಬ್ಬರಕ್ಕೆ ತರಗೆಲೆ ಬಳಕೆಗೆ ಕುಮ್ಕಿ ಜಮೀನು ಹಲವು ವರ್ಷಗಳಿಂದಲೂ ಸದ್ಬಬಳಕೆಯಾಗುತ್ತಿದೆ.
ಇದೀಗ ಗೊಬ್ಬರ ಮತ್ತು ಉರುವಲು ಉಪಯೋಗಿಸಿ ಬದುಕುವ ರೈತನಿಗೆ ನ್ಯಾಯಾಲಯದ ಆದೇಶ ಪಾಲನೆ ನೆಪದಲ್ಲಿ ಕೇಂದ್ರ ಸರ್ಕಾರವು ರೈತನ ಬೆನ್ನೆಲುಬನ್ನೇ ಮುರಿಯಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಜಿಲ್ಲೆಯವರೇ ಆದ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲು ಇವರಿಗೆ ಜಿಲ್ಲೆಯ ರೈತರ ಸಂಕಷ್ಟ ಗಮನಕ್ಕೆ ಬಂದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
